ADVERTISEMENT

ರಾಜಿ ಸಂಧಾನ ಬಾಂಧವ್ಯ ಬೆಸೆಯುವ ಕೊಂಡಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 19:35 IST
Last Updated 13 ಮಾರ್ಚ್ 2011, 19:35 IST

ಹರಪನಹಳ್ಳಿ:  ಕೌಟುಂಬಿಕ ಜೀವನದಲ್ಲಿ ಆಕಸ್ಮಿಕವಾಗಿ ಉದ್ಭವಿಸುವ ಕ್ಷುಲ್ಲಕ ಸಮಸ್ಯೆಗಳನ್ನು ಆರಂಭದಲ್ಲಿಯೇ ಹಿರಿಯರ ಸಮಕ್ಷಮ ಇತ್ಯರ್ಥಪಡಿಸಿದರೆ ಒಡೆದ ಕುಟುಂಬ ಹಾಗೂ ಮನಸ್ಸುಗಳ ಬಾಂಧವ್ಯದ ಬೆಸುಗೆಯಾಗುತ್ತದೆ ಎಂದು ಡಿವೈಎಸ್‌ಪಿ ಅನಿತಾ ಬಿ. ಹದ್ದಣ್ಣವರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಾಗಳಿಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾ.ಪಂ. ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ವ್ಯಕ್ತಿಯ ಸ್ವಾತಂತ್ರ್ಯ ಹರಣ ಹಾಗೂ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಾನೂನು ಹೋರಾಟ ಕೈಗೆತ್ತಿಕೊಳ್ಳಬೇಕೆ ಹೊರತು, ಸಣ್ಣ ಸಮಸ್ಯೆ ವಿರುದ್ಧ ಅಲ್ಲ. ಜೀವನ ಪರ್ಯಂತ ಸಾಮಾಜಿಕ ವ್ಯವಸ್ಥೆಯ ಕುಟುಂಬದಲ್ಲಿ ಜೀವಿಸಬೇಕಾದ ಅನಿವಾರ್ಯತೆ ಇರುವುದರಿಂದ ಕ್ಷುಲ್ಲಕ ವಿವಾದಗಳು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರುವುದು ಬೇಡ ಎಂದು ಕಿವಿಮಾತು ಹೇಳಿದರು.

ಸಿಪಿಐ ಬಿ.ಎಸ್. ಬಸವರಾಜ ಮಾತನಾಡಿ, ಎಷ್ಟೋ ಪ್ರಕರಣಗಳು ಕಾನೂನಿನ ತಿಳಿವಳಿಕೆ ಇಲ್ಲದೇ ಮುಚ್ಚಿ ಹೋಗುತ್ತಿವೆ. ಇದೇ ಕಾರಣಕ್ಕಾಗಿ ಮತ್ತು ಮನೆ ಬಾಗಿಲಿಗೆ ನ್ಯಾಯಾಲಯದಂತಹ ವಿಶಿಷ್ಟ ಪದ್ಧತಿಗೆ ನ್ಯಾಯಾಂಗ ಇಲಾಖೆ ಮುಂದಾಗಿದೆ. ಅದರ ಒಂದು ಭಾಗವೇ ಇಂದಿನ ಕಾನೂನು ಸಾಕ್ಷರತಾ ರಥದ ಉದ್ದೇಶ ಎಂದು ವಿವರಿಸಿದರು.ವಕೀಲರಾದ ಮಂಜುನಾಥ ಕಣಿವಿಹಳ್ಳಿ ಹಾಗೂ ಗೋಣಿಬಸಪ್ಪ ಅವರು ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಸವರಾಜ, ಮುಖಂಡರಾದ ಎನ್. ಬಸವಲಿಂಗನ ಗೌಡ, ಬಡಮ್ಮನವರ ಕೆಂಚಪ್ಪ, ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ತಾ.ಪಂ. ಯೋಜನಾಧಿಕಾರಿ ನಾಗೇಂದ್ರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.