ADVERTISEMENT

ರಾಮನಹಳ್ಳಿಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಿವಾಸಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2011, 19:30 IST
Last Updated 2 ನವೆಂಬರ್ 2011, 19:30 IST
ರಾಮನಹಳ್ಳಿಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಿವಾಸಿಗಳ ಪ್ರತಿಭಟನೆ
ರಾಮನಹಳ್ಳಿಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಿವಾಸಿಗಳ ಪ್ರತಿಭಟನೆ   

ಚಿಕ್ಕಮಗಳೂರು: ಕಸ ತ್ವರಿತ ವಿಲೇವಾರಿ, ಹಂದಿಗಳ ನಿರ್ಮೂಲನೆ, ಆಶ್ರಯ ಮನೆಗೆ ಆಗ್ರಹಿಸಿ ನಗರಸಭೆ ವ್ಯಾಪ್ತಿಯ ರಾಮನಹಳ್ಳಿ ಬಡಾವಣೆ ನಿವಾಸಿಗಳು, ಸಿಪಿಐ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಬಡಾವಣೆಯಲ್ಲಿ ಹತ್ತಾರು ಸಮಸ್ಯೆಗಳಿದ್ದು, ಜೀವನ ನಡೆಸುವದೇ ಆಸಾಧ್ಯ ಎನ್ನುವಂತಾಗಿದೆ. ನಗರಸಭೆ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸುವುದನ್ನೇ ಮರೆತಿದ್ದಾರೆ. ಆದರೆ, ತಪ್ಪದೇ ಕಂದಾಯ ವಸೂಲಿ ಮಾಡುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಾರ್ಡ್‌ನ ಖಾಲಿ ನಿವೇಶನಗಳಲ್ಲಿ ಪಾರ್ಥೇನಿಯಂ ಬೆಳೆದಿದ್ದು, ಹಾವು-ಹಂದಿಗಳ ಆವಾಸ ಸ್ಥಳವಾಗಿವೆ. ಕಸ ವಿಲೇವಾರಿ ಸಮರ್ಪಕವಾಗಿ ನಡೆಯದೇ ಚರಂಡಿಗಳು ದುರ್ವಾಸನೆ ಬೀರುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಡಾವಣೆಯ ಎಲ್ಲ ಬೀದಿಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸಬೇಕು. ನೀರಿನ ಪೈಪ್ ಒಡೆದು ಕುಡಿಯುವ ನೀರು ಸೋರಿಕೆಯಾಗುತ್ತಿದ್ದು, ದುರಸ್ತಿಪಡಿಸಬೇಕು ಎಂದರು.

ಬೀದಿ ಹಂದಿಗಳ ನಿರ್ಮೂಲನೆ ಮಾಡಬೇಕು. ವಾರಕ್ಕೊಮ್ಮೆ ಸೊಳ್ಳೆ ನಾಶಕ ಔಷಧ ಸಿಂಪರಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ನಗರಸಭೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳಿಗೇ ತಲುಪುವ ವ್ಯವಸ್ಥೆ ಆಗಬೇಕು ಎಂದು ಅವರು ಬೇಡಿಕೆ ಮುಂದಿಟ್ಟರು.

 2 ತಿಂಗಳಿಗೊಮ್ಮೆ ವಾರ್ಡ್‌ಗೆ ಅಧಿಕಾರಿಗಳು ಭೇಟಿ ನೀಡಿ ನಾಗರಿಕರ ಸಮಸ್ಯೆ ಆಲಿಸಬೇಕು. ಅರ್ಹರಿಗೆ ಆಶ್ರಯ ಮನೆ ವಿತರಿಸಬೇಕು. ಶೌಚಾಲಯ ನಿರ್ಮಿಸಿಕೊಳ್ಳಲು ನೆರವು ನೀಡಬೇಕು ಎಂದು ನಿವಾಸಿಗಳು ಮನವಿ ಮಾಡಿದರು.

ರೇಣುಕಾರಾಧ್ಯ, ರಘು, ವೇದಮೂರ್ತಿ, ರಮೇಶ್, ಜಯರಾಜ್, ಶಿವಣ್ಣ, ಖಲೀಲ್, ವಿಜಯಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.