ADVERTISEMENT

ಶುದ್ಧ ಕುಡಿಯುವ ನೀರಿಗೆ ಆಗ್ರಹಿಸಿ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಚಿತ್ರದುರ್ಗ: ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮಸ್ಥರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು.

ಗ್ರಾಮದಲ್ಲಿ ಫ್ಲೋರೈಡ್ ನೀರಿನಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಕಳೆದ 8-10 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಇದುವರೆಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಫ್ಲೋರೈಡ್ ನೀರಿನಿಂದ ಕೀಲುನೋವಿನಿಂದ ಗ್ರಾಮಸ್ಥರು ಬಳಲುತ್ತಿದ್ದು, ಹಲವಾರು ಮಂದಿ ಹಾಸಿಗೆ ಹಿಡಿದಿದ್ದಾರೆ. ಹಲ್ಲುಗಳು ಹುಳುಕಾಗಿವೆ. ಅನಾರೋಗ್ಯದಿಂದಾಗಿ ದೈನಂದಿನ ಬದುಕಿನ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ರಾಷ್ಟ್ರೀಯ ಹೆದ್ದಾರಿ-13ರ ಮೂಲಕ ಚಿಕ್ಕಗೊಂಡನಹಳ್ಳಿಯಿಂದ ಜಗಳೂರಿಗೆ ಶಾಂತಿಸಾಗರದ ನೀರು ಪೂರೈಸಲಾಗಿದೆ. ಆದ್ದರಿಂದ ಗ್ರಾಮದ ಮೂಲಕ ಹಾದುಹೋಗಿರುವ ಪೈಪ್‌ಲೈನ್‌ನಿಂದ ತಮಗೂ ನೀರು ಪೂರೈಸಬೇಕು. ಇದರಿಂದ ಅಲ್ಪಮಟ್ಟಿಗೆ ಗ್ರಾಮದ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದರು.

ಹೆದ್ದಾರಿ ತಡೆಯಲ್ಲಿ ಕುಮಾರಸ್ವಾಮಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಕೆ. ತಿಮ್ಮಾರೆಡ್ಡಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಟಿ. ತಿಪ್ಪೇಸ್ವಾಮಿ, ಮುಖಂಡರಾದ ಓ. ನಾಗೇಶ್, ಜಿ.ಬಿ. ನಾಗರಾಜ್, ಎಂ. ನಾಗರಾಜಪ್ಪ, ತಿಪ್ಪೇಸ್ವಾಮಿ, ಚಿದಾನಂದಮೂರ್ತಿ, ಓ. ರಾಜಪ್ಪ, ಎಸ್. ಕಾಂತರಾಜ, ಗ್ರಾ. ಪಂ. ಸದಸ್ಯರಾದ ಪಿ. ಪಾಲೇಶ್ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.