ADVERTISEMENT

ಸಮಾಜಮುಖಿ ರಾಜಕಾರಣಿ ಬಾಬೂಜಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2011, 19:30 IST
Last Updated 5 ಏಪ್ರಿಲ್ 2011, 19:30 IST
ಸಮಾಜಮುಖಿ ರಾಜಕಾರಣಿ ಬಾಬೂಜಿ
ಸಮಾಜಮುಖಿ ರಾಜಕಾರಣಿ ಬಾಬೂಜಿ   

ಚಿತ್ರದುರ್ಗ: ಸಮಾಜಮುಖಿ ರಾಜಕಾರಣಿಯಾಗಿದ್ದ ಡಾ.ಬಾಬು ಜಗಜೀವನರಾಂ ಅವರು, ಅಪ್ಪಟ ಗಾಂಧಿ ಭಕ್ತ ಮತ್ತು ದಲಿತ ಪ್ರತಿಭೆ ಎಂದು ಸರ್ಕಾರಿ ಕಲಾ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಚ್. ಲಿಂಗಪ್ಪ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಮಂಗಳವಾರ ಜಿಲ್ಲಾ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 104ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ದಲಿತರ ಬದುಕನ್ನು ಹಸನು ಮಾಡಲು ರಾಜಕೀಯ ಮೀಸಲಾತಿಯನ್ನು ಡಾ.ಬಿ.ಆರ್. ಅಂಬೇಡ್ಕರ್ ನೀಡಿದ್ದರೆ, ಉದ್ಯೋಗದಲ್ಲಿನ ಮೀಸಲಾತಿಯನ್ನು ಡಾ.ಬಾಬು ಜಗಜೀವನರಾಂ ಕಲ್ಪಿಸಿದರು. ಇದುವರೆಗೆ ಸುಮಾರು 1,700 ದಲಿತ ಸಂಸದರು ಮೀಸಲಾತಿ ಲಾಭ ಪಡೆದು ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಮೀಸಲಾತಿ ಲಾಭ ಪಡೆದ ಸಂಸದರು, ಅಧಿಕಾರಿಗಳು, ನೌಕರರೆಲ್ಲರೂ ದಲಿತರ ಬದುಕಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ, ಎಲ್ಲರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದಿದ ದಲಿತರು ಹಾಲುಂಡ ಸಮಾಜದ ಋಣ ತೀರಿಸಬೇಕು. ಬೇರೆಯವರನ್ನು ನಿಂದಿಸುವುದನ್ನು ಬಿಟ್ಟು ಸ್ವಯಂ ಅಭಿವೃದ್ಧಿ ಹೊಂದಬೇಕು. ಅಧಿಕಾರ ಚಲಾಯಿಸುವ ಹುದ್ದೆಯಲ್ಲಿರುವ ಐಎಎಸ್, ಕೆಎಎಸ್ ಅಧಿಕಾರಿಗಳು ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಪ್ರಮಾಣಿಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜಗಜೀವನರಾಂ ಅವರು ಕಾಂಗ್ರೆಸ್‌ನಲ್ಲಿದ್ದುಕೊಂಡೇ ದಲಿತರ ಹಿತಾಸಕ್ತಿ ಕಾಪಾಡಿದ್ದನ್ನೂ ಸ್ಮರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.