ADVERTISEMENT

ಸರಳ ವಿವಾಹ ಪ್ರೋತ್ಸಾಹಿಸಿ: ಮಾರುತಿ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 19:30 IST
Last Updated 28 ಜೂನ್ 2012, 19:30 IST
ಸರಳ ವಿವಾಹ ಪ್ರೋತ್ಸಾಹಿಸಿ: ಮಾರುತಿ ಸ್ವಾಮೀಜಿ ಸಲಹೆ
ಸರಳ ವಿವಾಹ ಪ್ರೋತ್ಸಾಹಿಸಿ: ಮಾರುತಿ ಸ್ವಾಮೀಜಿ ಸಲಹೆ   

ಶಿವಮೊಗ್ಗ: ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ವಿವಾಹ ಕಾರ್ಯ ನಡೆಸುವುದು ಕಷ್ಟಸಾಧ್ಯ. ಹಾಗಾಗಿ, ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವಂತಾಗಬೇಕು ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಸ್ವಾಮೀಜಿ ಸಲಹೆ ಮಾಡಿದರು.

ತಾಲ್ಲೂಕಿನ ಆಯನೂರಿನಲ್ಲಿ ಗುರುವಾರ ಧರ್ಮಶ್ರೀ ಸೇವಾ ಟ್ರಸ್ಟ್, ಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.  ಆಧುನಿಕ ಕಾಲದಲ್ಲಿ ಬಡ ಕುಟುಂಬವೊಂದು ವಿವಾಹ ಕಾರ್ಯ ಮಾಡುವುದು ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದರು.

ದಾಂಪತ್ಯ ಜೀವನದಲ್ಲಿ ಪತಿ, ಪತ್ನಿಯನ್ನು ಸಮಾನ ದೃಷ್ಟಿಯಿಂದ ನಡೆಸಿಕೊಂಡು ಹೋದಲ್ಲಿ ಯಾವುದೇ ಸಮಸ್ಯೆ ಎದುರಾಗದು. ಆದರೆ, ಪರಸ್ಪರ ಅರ್ಥೈಸುವಿಕೆ ಕೊರತೆಯಿಂದ ಇಂದು ವಿಚ್ಛೇದನ ಪಡೆಯುವ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಧರ್ಮ, ಅರ್ಥ ಮತ್ತು ಕಾಮದಲ್ಲಿ ಯಾವುದೂ ಅತಿಯಾಗಬಾರದು. ಇದನ್ನು ಗಂಡ-ಹೆಂಡತಿ ತಿಳಿದಲ್ಲಿ ದಾಂಪತ್ಯ ಜೀವನ ಸುಖಮಯವಾಗುತ್ತದೆ ಎಂದು ಸ್ವಾಮೀಜಿ ಸಲಹೆ ನೀಡಿದರು.

ADVERTISEMENT

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕ ಕೆ.ಜಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜಪ್ಪ, ಟ್ರಸ್ಟ್ ಅಧ್ಯಕ್ಷೆ ಮಂಜುಳಾ ಮಂಜುನಾಥ ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹ ಸಮಾರಂಭದಲ್ಲಿ 18 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಟ್ರಸ್ಟ್ ವತಿಯಿಂದ ನವ ವಧು-ವರರಿಗೆ ಹೊಸ ಬಟ್ಟೆ, ತಾಳಿ, ಕಾಲುಂಗುರ ಹಾಗೂ ಸೂಟ್‌ಕೇಸ್ ಅನ್ನು ಉಚಿತವಾಗಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.