ಮೈಸೂರು: ಪೆಟ್ರೋಲ್ ಬೆಲೆ ಆಗಾಗ್ಗೆ ಹೆಚ್ಚಳ ಆಗುತ್ತಿರುವುದರಿಂದ ಪರಿಸರ ಸ್ನೇಹಿ ಬೈಸಿಕಲ್ಗಳನ್ನು ಬಳಸಿ ಇಂಧನ ಉಳಿಸಿ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದು ಕಾರ್ಯಗತವಾಗುತ್ತಿದ್ದು, ಐಎಎಸ್, ಕೆಎಎಸ್ ದರ್ಜೆಯ ಅಧಿಕಾರಿಗಳೂ ಕೆಂಪು ಗೂಟದ ಸರ್ಕಾರಿ ಕಾರುಬದಿಗಿಟ್ಟು ಸೈಕಲ್ ತುಳಿಯುತ್ತಿದ್ದಾರೆ.
ಹೌದು. ಸರ್ಕಾರಿ ನೌಕರರು ಪ್ರತಿ ಸೋಮವಾರ ಕಚೇರಿಗೆ ಕಡ್ಡಾಯವಾಗಿ ಸೈಕಲ್ನಲ್ಲೇ ಬರಬೇಕು ಎಂಬ ಆದೇಶವನ್ನು ಜಿಲ್ಲಾಡಳಿತ ಈಚೆಗೆ ಹೊರಡಿಸಿತು. ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಆದೇಶ ಹೊರಡಿಸಿ ಸುಮ್ಮನಾಗಲಿಲ್ಲ. ತಾವು ಸಹ ಸರ್ಕಾರಿ ಕಾರು ಬಿಟ್ಟು ಮನೆಯಿಂದ ಕಚೇರಿಗೆ ಹೋಗಲು ಸೈಕಲ್ ಬಳಸುತ್ತಿದ್ದಾರೆ. ಕಳೆದ ಸೋಮವಾರದಿಂದ ಆರಂಭವಾದ ಈ ಸೈಕಲ್ ಸವಾರಿ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ.
ಆದೇಶ ಹೊರಡಿಸಿದ ಮೊದಲ ಸೋಮವಾರ ಐಎಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಕೆಲವರು ಮಾತ್ರ ಮನೆಯಿಂದ ಕಚೇರಿಗೆ ಬೈಸಿಕಲ್ಗಳಲ್ಲಿಯೇ ಬಂದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಡಾ.ಸಿ.ಜಿ.ಬೆಟಸೂರ್ಮಠ ಅವರು ಸೈಕಲ್ನಲ್ಲಿ ಬಾರದ ಸಿಬ್ಬಂದಿಯನ್ನು ಕಚೇರಿಯ ಆವರಣದ ಒಳಕ್ಕೆ ಬಿಡದಂತೆ ಭದ್ರತಾ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.
ಹಾಗಾಗಿ ಬೈಸಿಕಲ್ನಲ್ಲಿ ಬರುವ ಸಿಬ್ಬಂದಿಗೆ ಮಾತ್ರ ಗೇಟ್ ತೆಗೆಯಲಾಗುತ್ತಿದೆ. ಉಳಿದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಕಳೆದ ವಾರ ದ್ವಿಚಕ್ರ ವಾಹನಗಳಲ್ಲಿ ಬಂದು ವಾಪಸ್ ತೆರಳಿದವರು, ಈ ವಾರ ಬೈಸಿಕಲ್ನಲ್ಲಿ ಬಂದರು.
ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಅವರು ಹುಣಸೂರು ರಸ್ತೆಯ ತಮ್ಮ ನಿವಾಸದಿಂದ ಗನ್ಮೆನ್ ಜೊತೆ ಎರಡು ಸೀಟು ಉಳ್ಳ ಸೈಕಲ್ ಏರಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಒಂದೇ ಸೈಕಲ್ನಲ್ಲಿ ಇಬ್ಬರು ಕುಳಿತಿದ್ದರಿಂದ ರಸ್ತೆಯಲ್ಲಿ ಹೋಗುವವರ ಗಮನ ಇವರೆಡೆ ನೆಟ್ಟಿತ್ತು. ಸೈಕಲ್ನಲ್ಲಿರುವವರು ಜಿಲ್ಲಾಧಿಕಾರಿ ಎಂದು ಖಾತರಿಯಾದಾಗ ಕೆಲವರು ಕೈ ಎತ್ತಿ ಶುಭ ಕೋರಿದರು. ಜಿಲ್ಲಾಧಿಕಾರಿ ಸಹ ಕೈ ಬೀಸಿ ನಸುನಕ್ಕರು.
ಮಹಾನಗರಪಾಲಿಕೆ ಹಿರಿಯ ಅಧಿಕಾರಿಯಿಂದ ಹಿಡಿದು ಎಲ್ಲರೂ ಸೈಕಲ್ನಲ್ಲಿ ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಸಾಮೂಹಿಕವಾಗಿ ಸೈಕಲ್ನಲ್ಲಿ ಬರುವ ಮೂಲಕ ಎಲ್ಲರ ಗಮನ ಸೆಳೆದರು.
ಪಾಲಿಕೆ ಆಯುಕ್ತ ಡಾ.ಎಂ.ಆರ್.ರವಿ ಸೈಕಲ್ ಏರಿ ಸಿಬ್ಬಂದಿಯೊಂದಿಗೆ ಕಚೇರಿ ತಲುಪಿದರು. ಉಪ ಆಯುಕ್ತ ಧರ್ಮಪ್ಪ, ಪಾಲಿಕೆ ವಲಯ ಸಹಾಯಕ ಆಯುಕ್ತರು, ಸಹ ಆಯುಕ್ತರ ಸೈಕಲ್ ಸವಾರಿಗೆ ಸಾಥ್ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಡಾ.ಅಜಯ್ ನಾಗಭೂಷಣ್, ಮುಡಾ ಆಯುಕ್ತ ಡಾ.ಸಿ.ಜಿ.ಬೆಟಸೂರ್ಮಠ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದ ಗಿರೀಶ್, ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್.ಪ್ರಕಾಶ್ ಅವರು ಸಹ ಸೈಕಲ್ನಲ್ಲೇ ಕಚೇರಿ ಸೇರಿದ್ದಾರೆ.
ಪ್ರತ್ಯೇಕ ಪಥ: ಅಧಿಕಾರಿಗಳು ಸೈಕಲ್ ತುಳಿಯಲು ಆರಂಭಿಸಿರುವುದರಿಂದ ನಗರದಲ್ಲಿ ಸೈಕಲ್ಗಳ ಓಡಾಟಕ್ಕೆ ರಸ್ತೆಯಲ್ಲಿ ಪ್ರತ್ಯೇಕ ಪಥವನ್ನೇ ನಗರ ಸಂಚಾರ ಪೊಲೀಸ್ ಗುರುತಿಸುತ್ತಿದೆ.
ಅಧಿಕಾರಿಗಳು ಸೈಕಲ್ ತುಳಿಯುತ್ತಿರುವುದನ್ನು ನೋಡಿ ಕೆಲವರು ಅವಾಕ್ಕಾದರು. `ಹಿರಿಯ ಅಧಿಕಾರಿಗಳೇ ಸೈಕಲ್ ತುಳಿಯುವುದಾದರೆ, ನಾವೇಕೆ ಸೈಕಲ್ ಬಳಸಬಾರದು~ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.