ಮದ್ದೂರು: ಪಟ್ಟಣ ಸಹಕಾರಿ ಬ್ಯಾಂಕುಗಳ ಸದಸ್ಯರಿಗೆ ಹೊಸ ವಿಮಾ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ.ಪಾಟೀಲ್ ಸೋಮವಾರ ತಿಳಿಸಿದರು.
ಪಟ್ಟಣದ ಶಿಂಷಾ ಸಹಕಾರ ಬ್ಯಾಂಕಿಗೆ ಭೇಟಿ ನೀಡಿದ ಅವರು, ಬ್ಯಾಂಕಿನ ವಹಿವಾಟು ಕುರಿತು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಡನೆ ಮಾತನಾಡಿದರು.
ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರ ಹಿತರಕ್ಷಿಸುವ ನಿಟ್ಟಿನಲ್ಲಿ ಮಹಾಮಂಡಳದ ಮೂಲಕ ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಅಲ್ಲದೇ ವೃತ್ತಿಪರ ತರಬೇತಿಗಳನ್ನು ನೀಡುವ ಮೂಲಕ ಸ್ವಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಮಂಡಳದ ಮೂಲಕ ರೂಪಿಸಲಾಗುತ್ತಿದೆ ಎಂದರು.
ಮಹಾಮಂಡಳ ವ್ಯಾಪ್ತಿಯ ಬಹುತೇಕ ಬ್ಯಾಂಕುಗಳಲ್ಲಿ ಕೋರ್ ಬ್ಯಾಂಕಿಂಗ್ ಪದ್ಧತಿ ಜಾರಿಗೊಳಿಸಲಾಗಿದೆ. ಎಟಿಎಂ ಕೇಂದ್ರಗಳನ್ನು ಸ್ಥಾಪನೆ ಮಾಡಲು ರಿಸರ್ವ್ ಬ್ಯಾಂಕಿನ ಅನುಮತಿ ಕಾಯಲಾಗುತ್ತಿದೆ. ಚಿನ್ನದ ಖರೀದಿ ವ್ಯವಸ್ಥೆಯನ್ನು ಸಹಕಾರ ಬ್ಯಾಂಕುಗಳ ಮೂಲಕ ಜಾರಿಗೆ ತೆರಲು ಚಿಂತನ ನಡೆಸಲಾಗಿದೆ ಎಂದು ವಿವರಿಸಿದರು.
ಬ್ಯಾಂಕಿನ ಅಧ್ಯಕ್ಷ ಬಿ.ಅಪ್ಪಾಜಯ್ಯ, ಉಪಾಧ್ಯಕ್ಷ ಬೋರಯ್ಯ, ನಿರ್ದೇಶಕರಾದ ಬಿ.ಎಂ.ವನಜಾಕ್ಷಿರಾಮರಾಜು, ಎಂ.ಸಿ.ಸತೀಶ್, ವ್ಯವಸ್ಥಾಪಕ ಲಕ್ಷ್ಮಿನಾರಾಯಣಗೌಡ, ಗುಮಾಸ್ತರಾದ ಸಾಯಿ ಪ್ರಸನ್ನ, ಉಮಾಶಂಕರ್ ಸೇರಿದಂತೆ ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.