ADVERTISEMENT

ಹಳ್ಳಕ್ಕೆ ಆಟೋ ಉರುಳಿ ಐವರ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಚಾಮರಾಜನಗರ: ಚಾಲಕನ ಅಜಾಗರೂಕತೆಯಿಂದ ಸರಕು ಸಾಗಣೆ ಆಟೊ  ಹಳ್ಳಕ್ಕೆ ಉರುಳಿ ಬ್ದ್ದಿದು ಐವರು ಮೃತಪಟ್ಟು 15 ಮಂದಿ ಮಹಿಳೆಯರು ಗಾಯಗೊಂಡ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಗಾಣಿಗಮಂಗಲ ಗ್ರಾಮದ ಬಳಿ ಬುಧವಾರ ನಡೆದಿದೆ.

ಕಳ್ಳಿದೊಡ್ಡಿ ಗ್ರಾಮದ ರತ್ನಮ್ಮ (28), ಮಹದೇವಮ್ಮ (48), ಶಿವಮಲ್ಲಮ್ಮ (45), ತುಳಸಮ್ಮ (38) ಹಾಗೂ ಗಾಣಿಗಮಂಗಲದ ಬೋಳೆಮಾದೇಗೌಡ (54) ಮೃತಪಟ್ಟವರು.

ಕಳ್ಳಿದೊಡ್ಡಿ ಗ್ರಾಮದಿಂದ ಗಾಣಿಗಮಂಗಲದ ತೋಟವೊಂದರಲ್ಲಿ ಕೆಲಸ ಮಾಡಲು  ಬೋಳೆಮಾದೇಗೌಡ  ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿದ್ದರು. ಚಾಲಕನ ಅತಿಯಾದ ವೇಗವೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಆಟೋ ಈಜಿಕೆರೆ ಬಳಿಯ ಹಳ್ಳಕ್ಕೆ ಉರುಳಿ ಬಿತ್ತು. ರತ್ನಮ್ಮ ಸ್ಥಳದಲ್ಲಿಯೇ ಮೃತಪಟ್ಟರು. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆ ಹಾಗೂ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೊ ಚಾಲಕ ಮುತ್ತುಕುಮಾರ್ ಪರಾರಿಯಾಗಿದ್ದಾನೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಹನೂರು ಕ್ಷೇತ್ರದ ಶಾಸಕ ಆರ್. ನರೇಂದ್ರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಿ ಕೊಡುವ ಬಗ್ಗೆ ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT