ಹಿರೀಸಾವೆ: ದೃಶ್ಯ ಮಾಧ್ಯಮದ ಹಾವಳಿಯಿಂದ ಹಳ್ಳಿ ಸಂಸ್ಕೃತಿ ನಶಿಸುತ್ತಿದೆ ಎಂದು ಸಾಹಿತಿ ಡಾ.ನಿಂಬೆಹಳ್ಳಿ ಚಂದ್ರೇಗೌಡ ಭಾನುವಾರ ಬೇಸರ ವ್ಯಕ್ತಪಡಿಸಿದರು.
ಬೂಕ ಗ್ರಾಮದಲ್ಲಿ ಹಿರೀಸಾವೆಯ ನಾಗಮ್ಮ ಶ್ರೀಕಂಠಯ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕವು ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಜನತೆ ಯಾವುದೇ ಕಾರಣಕ್ಕೂ ದೃಶ್ಯ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಬಾರದು ಎಂದು ಹೇಳಿದರು.
ಗಿಡಮೂಲಿಕೆ ಬೆಳೆಸಬೇಕು. ಅದರ ಉಪಯೋಗವನ್ನು ಯುವಜನತೆಗೆ ತಿಳಿಸುವ ಮೂಲಕ ಭಾರತಿಯ ಔಷಧಿಯ ಪದ್ಧತಿ ಅಭಿವೃದ್ಧಿಪಡಿಸಲು ಗ್ರಾಮೀಣ ಜನರು ಗಮನಹರಿಸಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಜೆ.ಬಿ.ಶಿವರಾಜು ಮಾತನಾಡಿ, ಮಾಧ್ಯಮಗಳು ಈಚಿನ ದಿನಗಳಲ್ಲಿ ಅನಾವಶ್ಯಕ ವಿಷಯಕ್ಕೆ ಹೆಚ್ಚು ಪ್ರಚಾರ ನೀಡುತ್ತಿವೆ. ಇದರಲ್ಲಿ ದೃಶ್ಯ ಮಾಧ್ಯಮದ ಪಾತ್ರ ಹೆಚ್ಚು. ಸರ್ಕಾರಗಳು ಕಡಿವಾಣ ಹಾಕಲು ಚಿಂತನೆ ಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್.ಶ್ರೀಧರ್ ಮಾತನಾಡಿದರು. ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ರಾಜ್ಯ ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ಎಚ್.ವಿ.ಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಕಿರಣ್, ರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ್, ಎಎಸ್ಐ ಚಂದ್ರೇಗೌಡ, ಪ್ರಾಂಶುಪಾಲ ವಾಮರಾಜ ಇದ್ದರು. ಸಾಹಿತ್ಯ ಪರಿಷತ್ನ ಬಿ.ಸಿ.ಬೊಮ್ಮೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಡಿ.ಜಿ.ಅಂಬಿಕಾ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.