ಚಿಕ್ಕಮಗಳೂರು: ಸಿಪಿಐ(ಎಂಎಲ್) ರಾಜ್ಯ ಸಮ್ಮೇಳನ ನಗರದಲ್ಲಿ ಇದೇ 17ರಿಂದ 19ರವರೆಗೆ ನಡೆಯಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ತಿಳಿಸಿದರು.
ನ. 7ರಿಂದ 12ರವರೆಗೆ ಒಡಿಶಾದ ಭುವನೇಶ್ವರದಲ್ಲಿ ಪಕ್ಷದ 9ನೇ ಮಹಾ ಅಧಿವೇಶನ ನಡೆಯಲಿದ್ದು, ಅದರ ಅಂಗವಾಗಿ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 5 ಸಾವಿರ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೆಇಬಿ ವೃತ್ತದಿಂದ ಆರಂಭಗೊಳ್ಳುವ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಯ ಕಲಾ ತಂಡ ಪಾಲ್ಗೊಳ್ಳಲಿವೆ. ಬಹಿರಂಗ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಮಂಡಳಿ ಮುಖಂಡ ಕೆ.ಎನ್.ರಾಮಚಂದ್ರನ್, ಆರ್.ಮಾನಸಯ್ಯ, ವಕೀಲ ಪ್ರಕಾಶ್, ಕೊಪ್ಪಳ ಬಂಡಾಯ ಸಾಹಿತಿ ವಿಠಪ್ಪ ಗೋರಂಟ್ಲಿ, ಕ್ರಾಂತಿಕಾರಿ ಕವಿ ದಾನಪ್ಪ ನಿಲೋಗಲ್, ಮಡಿಕೇರಿ ಜಿಲ್ಲೆ ವಕೀಲ ವಿದ್ಯಾಧರ, ವೈ.ಕೆ.ಚಂದ್ರಶೇಖರಪ್ಪ, ಸೂಫಿ ತತ್ವ ಅನುಭವ ಚಿಂತನಾ ವೇದಿಕೆ ಸಂಚಾಲಕ ಮುರ್ಷಿದ್ಜಾನ್, ಟಿ.ಯು.ಸಿ.ಐ. ಮುಖಂಡ ಗುಲ್ಬರ್ಗಾದ ಎ.ಬಿ.ದಾಸ್, ದಲಿತ ಸಂಘರ್ಷ ಸಮಿತಿಯ ಕೆ.ಪಿ.ರಾಜರತ್ನಂ, ರೈತ ಸಂಘದ ಕೆ.ಕೆ.ಕೃಷ್ಣೇಗೌಡ, ದುಗ್ಗಪ್ಪಗೌಡ ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ 18 ಮತ್ತು 19ರಂದು ನಗರದ ಅಂಬೇಡ್ಕರ್ ಭವನದಲ್ಲಿ ಪ್ರತಿನಿಧಿಗಳ ಸಭೆಯೂ ನಡೆಯಲಿದೆ ಎಂದರು. ರಾಜ್ಯ ಸಮಿತಿ ಸದಸ್ಯರಾದ ಕೆ.ಎನ್.ರಮೇಶ್, ಲಲಿತಾ, ಸುಧಾ, ಜಿಲ್ಲಾ ಕಾರ್ಯದರ್ಶಿ ಐ.ಎಂ.ಪೂರ್ಣೇಶ್, ಉದ್ದಪ್ಪ, ರುಕ್ಷ್ಮಿಣಿ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.