ADVERTISEMENT

ನಗರಸಭೆ ನೂತನ ಮಳಿಗೆಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 6:47 IST
Last Updated 5 ಜನವರಿ 2018, 6:47 IST

ಸುರಪುರ: ‘ನಗರದ ಅಭಿವೃದ್ಧಿ ನನ್ನ ಸಂಕಲ್ಪ. ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಶ್ರಮವಹಿಸಿ ಅನುದಾನ ತರುವುದು ನನ್ನ ಜವಾಬ್ದಾರಿ. ಅದನ್ನು ಸದ್ಬಳಕೆ ಮಾಡಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುವುದು ಅಧಿಕಾರಿಗಳ ಕೆಲಸ’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ನಗರಸಭೆಯ ಎಸ್ಎಫ್‌ಸಿ ಯೋಜನೆ ಅಡಿಯಲ್ಲಿ ₹12 ಲಕ್ಷ ವೆಚ್ಚದಲ್ಲಿ ನಗರಸಭೆ ಪ್ರಾಂಗಣದಲ್ಲಿ ನಿರ್ಮಿಸಲಾದ ನೂತನ ಮೂರು ಮಳಿಗೆಗಳನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಗರಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ವಿವಿಧ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನ ಕಲ್ಪಿಸುತ್ತಿದೆ. ಅಧಿಕಾರಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ಮಾದರಿ ನಗರವನ್ನಾಗಿ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಕೆಲ ವಾರ್ಡ್‌ಗಳಲ್ಲಿ ಸುಲಭ ಶೌಚಾಲಯ ಶುದ್ಧನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಒಟ್ಟಾರೆಯಾಗಿ ನಗರದ ಜನತೆಗೆ ಮೂಲ ಸೌಲಭ್ಯ ಒದಗಿಸಲು ಬದ್ದನಾಗಿದ್ದೇನೆ. ಮುಂಬರುವ ದಿನಗಳಲ್ಲಿ ನಗರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವುದಾಗಿ’ ಭರವಸೆ ನೀಡಿದರು.

ಪೌರಾಯುಕ್ತ ದೇವಿಂದ್ರ ಹೆಗ್ಗಡೆ ಮಾತನಾಡಿ, ‘ನಗರಸಭೆಯಿಂದ ಇದುವರೆಗೂ ಒಟ್ಟು 56 ಮಳಿಗೆಗಳನ್ನು ನಿರ್ಮಿಸಲಾಗಿದೆ. ಹಳೆಯ ಮತ್ತು ನೂತನ ಮಳಿಗೆ ಸೇರಿದಂತೆ ಎಲ್ಲಾ ಮಳಿಗೆಗಳಿಗೆ ಶೀಘ್ರ ಟೆಂಡರ್ ಕರೆದು ಬಾಡಿಗೆ ನೀಡಲಾಗುವುದು’ ಎಂದು ವಿವರಿಸಿದರು.

ನಗರಸಭೆ ಅಧ್ಯಕ್ಷೆ ಕವಿತಾ ಎಲಿಗಾರ, ಉಪಾಧ್ಯಕ್ಷೆ ರಾಣಿ ಸರಿತಾನಾಯಕ, ವಿರೋಧ ಪಕ್ಷದ ಸದಸ್ಯ ವೇಣುಮಾಧವ ನಾಯಕ, ಸದಸ್ಯರಾದ ಪಾರಪ್ಪ ಗುತ್ತೇದಾರ, ಶೇಖ ಮಹಿಬೂಬ ಒಂಟಿ, ವೆಂಕಟೇಶ ಹೊಸ್ಮನಿ, ರಾಜಾ ಜೈರಾಮ ನಾಯಕ, ಮನೋಹರ ಕುಂಟೋಜಿ, ದಾವಲಸಾಬ ಚಿಟ್ಟಿವಾಲೆ, ಖಾಲೀದಹ್ಮದ್ ತಾಳಿಕೋಟ, ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಎಇಇ ಸುನೀಲ, ಜೀವನ ಕಟ್ಟಿಮನಿ, ಸುರೇಂದ್ರ ದೊಡ್ಮನಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.