ಸಾವಳಗಿ: ಇಲ್ಲಿನ ಭಜಂತ್ರಿ ಗಲ್ಲಿಯಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಮಳೆಯಿಂದಾಗಿ ಕಟ್ಟಡ ಕುಸಿಯುತ್ತದೆ ಎನ್ನುವ ಭೀತಿ ಎದುರಾಗಿದೆ. ಸುಮಾರು 20 ವರ್ಷದ ಹಿಂದೆ ನಿರ್ಮಾಣವಾಗಿರುವ ಕಟ್ಟಡದ ಚಾವಣಿ ಮತ್ತು ಗೋಡೆ ಬಿರುಕು ಬಿಟ್ಟಿದೆ. ಮಳೆ ಬಂದಾಗ, ನೀರು ಕಟ್ಟಡದೊಳಗೆ ತೊಟ್ಟಿಕ್ಕುತ್ತದೆ.
ಮಳೆಯಿಂದಾಗಿ ಕಟ್ಟಡದೊಳಗೆ ಸಂಗ್ರಹಗೊಳ್ಳುವ ನೀರನ್ನು ಅಂಗನವಾಡಿ ಸಿಬ್ಬಂದಿ, ನಿತ್ಯ ಹೊರ ಚೆಲ್ಲಿ ಸ್ವಚ್ಛಗೊಳಿಸಿ ಮಕ್ಕಳನ್ನು ಕೂರಿಸ
ಬೇಕಾಗಿದೆ ಎಂದು ಅಂಗನವಾಡಿ ಸಿಬ್ಬಂದಿ ಹೇಳಿದರು.
ವಾರದ ಹಿಂದೆಯಷ್ಟೇ ಅಂಗನವಾಡಿ ಕೇಂದ್ರಕ್ಕೆ ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಭೇಟಿ ನೀಡಿದ್ದರು. ಈ ವೇಲೆ, ಕಟ್ಟಡದ ಶಿಥಿಲಾವಸ್ಥೆ ನೋಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಸದ್ಯ ಮಳೆಗಾಳ ಪ್ರಾರಂಭವಾದ ಕಾರಣ, ನೂತನ ಕಟ್ಟಡ ನಿರ್ಮಾಣ ಸಾಧ್ಯವಿಲ್ಲ. ಮಕ್ಕಳಿಗೆ ಏನಾದರೂ ಅಪಾಯವಾದರೆ ಯಾರ ಹೊಣೆ? ಕೂಡಲೇ ಅಂಗನವಾಡಿ ಕೇಂದ್ರವನ್ನು ಸುಸಜ್ಜಿತವಾದ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ, ಅಂಗನವಾಡಿಗೆ ಕೇಂದ್ರಕ್ಕೆ ಬೀಗಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
‘ತಾಲ್ಲೂಕು ಪಂಚಾಯ್ತಿಯವರು ಅಂಗನವಾಡಿ ಕಟ್ಟಡದ ದುರಸ್ತಿ ಮಾಡಲು ಸೂಚಿಸಿದ್ದಾರೆ. ಶಿಶು ಅಭಿವೃದ್ಧಿ ಅಧಿಕಾರಿಗಳು ಅನುಮತಿ ನೀಡಿದ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಮಾಳಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.