ADVERTISEMENT

ಕಳಪೆ ಕಾಮಗಾರಿ: ಆರೋಪ

ಅವೈಜ್ಞಾನಿಕ ವಿನ್ಯಾಸಕ್ಕೆ ಆಶ್ರಯ ಮನೆ ಫಲಾನುಭವಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಮೇ 2018, 14:12 IST
Last Updated 30 ಮೇ 2018, 14:12 IST
ಇಳಕಲ್‍ ವಿಜಯ ಮಹಾಂತೇಶ ಕತೃ ಗದ್ದುಗೆ ಹತ್ತಿರದ ಆಶ್ರಯ ಬಡಾವಣೆಯಲ್ಲಿ ನಿರ್ಮಿತಿ ಸಂಸ್ಥೆ ನಿರ್ಮಿಸುತ್ತಿರುವ ಮನೆಗಳಿಗೆ ನೆಲಮಟ್ಟದಲ್ಲಿಯೇ ಪಾಯ (ಬೀಮ್‍) ಹಾಕಲಾಗುತ್ತಿದೆ.
ಇಳಕಲ್‍ ವಿಜಯ ಮಹಾಂತೇಶ ಕತೃ ಗದ್ದುಗೆ ಹತ್ತಿರದ ಆಶ್ರಯ ಬಡಾವಣೆಯಲ್ಲಿ ನಿರ್ಮಿತಿ ಸಂಸ್ಥೆ ನಿರ್ಮಿಸುತ್ತಿರುವ ಮನೆಗಳಿಗೆ ನೆಲಮಟ್ಟದಲ್ಲಿಯೇ ಪಾಯ (ಬೀಮ್‍) ಹಾಕಲಾಗುತ್ತಿದೆ.   

ಇಳಕಲ್: ‘ವಿಜಯ ಮಹಾಂತೇಶ ಕತೃ ಗದ್ದುಗೆ ಹತ್ತಿರದ ಆಶ್ರಯ ಬಡಾವಣೆಯಲ್ಲಿ ನಿರ್ಮಿತಿ ಸಂಸ್ಥೆ ನಿರ್ಮಿಸುತ್ತಿರುವ ಆಶ್ರಯ ಮನೆಗಳು ನಿರ್ಮಾಣ ಹಂತದಲ್ಲಿಯೇ ಕರಗುತ್ತಿವೆ. ಈ ಆಶ್ರಯ ಮನೆಗಳು ಲೆಕ್ಕಕ್ಕುಂಟು, ಆದರೆ ಆಸರೆಗಲ್ಲ, ಬಾಳಕೆಗಲ್ಲ ಎಂಬಂತಾಗಿವೆ’ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

ಸರ್ವೆ ನಂಬರ್ 22/1ರಲ್ಲಿ 240 ಮನೆಗಳು ಹಾಗೂ 23/1ರಲ್ಲಿ 91 ಮನೆಗಳನ್ನು ತಲಾ ₹ 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆದರೆ ನಿರ್ಮಾಣಕ್ಕೆ ಬಳಸುವ ವಸ್ತುಗಳು ಹಾಗೂ ತಂತ್ರಜ್ಞಾನ ನೋಡಿದರೆ ಇವು ಒಂದು ತಲೆಮಾರು ಕೂಡ ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವ ಭರವಸೆ ಇಲ್ಲ.

ಕಪ್ಪು ಮಣ್ಣಿನಿಂದ ಕೂಡಿದ ಇಲ್ಲಿಯ ನಿವೇಶನಗಳಲ್ಲಿ ಕೇವಲ 6 ಮತ್ತು 8 ಎಂಎಂ ಕಬ್ಬಿಣದ ಸರಳುಗಳನ್ನು ಬಳಿಸಿ ನೆಲಮಟ್ಟದಲ್ಲಿ ಬೀಮ್‍ ಹಾಕಲಾಗುತ್ತಿದೆ. ಕೆಳಗಡೆ ಕಲ್ಲಿನ ಗೊಡೆ ಇಲ್ಲ. ಕಪ್ಪು ಮಣ್ಣಿನ ಮೇಲೆ ಹಾಕಿದ ಅನೇಕ ಬೀಮ್‍ಗಳು ಈಗಲೇ ಬೆಂಡ್‍ (ವಕ್ರ) ಆಗಿವೆ. ಈ ಬೀಮ್ ಮೇಲೆ ಕಟ್ಟಿದ ಸಿಮೆಂಟ್ ಇಟ್ಟಿಗೆಗಳು ಅಲ್ಪಸ್ವಲ್ಪ ಮಳೆಗೆ ಕರಗಿ ಹೋಗಿವೆ.

ADVERTISEMENT

300 ಚದರ ಅಡಿಯ ಮನೆ ನಿರ್ಮಾಣಕ್ಕೆ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ
ದಿಂದ ₹ 1.2 ಲಕ್ಷ, ಕೇಂದ್ರ ಸರ್ಕಾರದಿಂದ ₹ 1.5 ಲಕ್ಷ, ಫಲಾನುಭವಿಯ ವಂತಿಗೆ ₹ 30 ಸಾವಿರ, ಬ್ಯಾಂಕ್ ನೀಡಿದ ₹ 50 ಸಾಲ ಸೇರಿ ಒಟ್ಟು ₹ 3.5 ಲಕ್ಷ ಖರ್ಚು ಮಾಡಲಾಗುತ್ತಿದೆ. ಬ್ಯಾಂಕಿನ ಸಾಲ ಮರುಪಾವತಿಗೂ ಮೊದಲೇ ಈ ಮನೆಗಳು ನೆಲ ಸಮವಾಗಬಹುದು ಎನ್ನುವುದು ಫಲಾನುಭವಿಗಳಾದ ಮಹಾಂತೇಶ ಯಲಬುರ್ಗಿ ಹಾಗೂ ಪರಶುರಾಮ ಅವರ ಆತಂಕ.

ಸೂಕ್ತ ಅಳತೆ ಇಲ್ಲ: ಈ ಆಶ್ರಯ ಕಾಲೊನಿಯ ಬಹುತೇಕ ಫಲಾನುಭವಿಗಳು ನೇಕಾರರು. ಆದರೆ ಈ ಮನೆಗಳ ನೀಲನಕ್ಷೆ ನೋಡಿದರೆ ಒಂದೇ ಒಂದು ಮಗ್ಗ ಹಾಕಿಕೊಳ್ಳಲು ಸಹ ಅಲ್ಲಿ ಜಾಗ ಇಲ್ಲ. ಈ ಬಗ್ಗೆ ನಿರ್ಮಾಣದ ಮೇಲ್ವಿಚಾರಣೆ ನಡೆಸುವ ನಿರ್ಮಿತಿ ಕೇಂದ್ರದ ಎಂಜನಿಯರ್ ಅವರನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಫಲಾನುಭವಿಗಳ ಆತಂಕಕ್ಕೆ ಸ್ಪಂದಿಸುತ್ತಿಲ್ಲ.

‘ಮಗ್ಗ ಹಾಕಲು ಆಗದಂತಹ ಸಣ್ಣ ಕೊಠಡಿಗಳು, ಕಳಪೆ ಕಟ್ಟಡದ ಸಾಮಗ್ರಿಗಳು, ಅವೈಜ್ಞಾನಿಕ ತಂತ್ರಜ್ಞಾನ
ದಿಂದ ಕಟ್ಟುತ್ತಿರುವ ಈ ಮನೆಗಳನ್ನು ಪಡೆದುಕೊಳ್ಳಲು ಸಾಲ ಮಾಡಿ ಹಣ ಕಟ್ಟುವುದು ವ್ಯರ್ಥ. ಕೂಡಲೇ ಶಾಸಕರು, ಸಂಬಂಧಿಸಿದ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಚರ್ಚಿಸಿ, ಗುಣಮಟ್ಟದ ಹಾಗೂ ಮಗ್ಗ ಇಟ್ಟುಕೊಳ್ಳಲು ಅನುಕೂಲಕರವಾಗಬಲ್ಲ ವಿನ್ಯಾಸದಲ್ಲಿ ಮನೆಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದ್ದಾರೆ.

**
ಕಟ್ಟಡ ನಿರ್ಮಾಣಕ್ಕೆ ಕಳಪೆ ಸಾಮಗ್ರಿ ಬಳಸುತ್ತಿಲ್ಲ. ನಿಯಮಾನುಸಾರ ಸಾಮಗ್ರಿಗಳನ್ನು ಬಳಸಿ, ನೀಡಿದ ವಿನ್ಯಾಸದಲ್ಲಿಯೇ ನಿರ್ಮಿಸಲಾಗುತ್ತಿದೆ
ಎಸ್.ಎಂ. ಪಾಟೀಲ, ಗುತ್ತಿಗೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.