ಹುನಗುಂದ : ಇದೇ ತಿಂಗಳ ಅಂತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು. ಎಲ್ಲಕಡೆ ಭರದಿಂದ ಪ್ರಚಾರವೂ ನಡೆದಿದೆ. ಸಾಹಿತ್ಯ ಪರಿಷತ್ತು ಈಗಾಗಲೇ ಪ್ರಕಟಿಸಿದ ಅರ್ಹ ಮತದಾರರ ಯಾದಿಯ ಅಧ್ವಾನ ಗಳನ್ನು ನೋಡಿದರೆ ಪ್ರಜ್ಞಾವಂತರು ನಾಚಿಕೆಪಡು ವಂತಿದೆ.ಕಳೆದ ಹತ್ತು ವರ್ಷಗಳ ಹಿಂದೆ ಮೃತಪಟ್ಟ ಆಜೀವ ಸದಸ್ಯರು (ಮತದಾರರು) ಇನ್ನೂ ಮತದಾರ ಪಟ್ಟಿಯಲ್ಲಿದ್ದಾರೆ.
ಸದ್ಯದ ಮತದಾರ ಯಾದಿಯಲ್ಲಿ ಮಾಜಿ ಸಚಿವ ಎಸ್.ಆರ್.ಕಾಶಪ್ಪನವರ, ನಾಟಕಕಾರ ಪಿ.ಬಿ. ಧುತ್ತರಗಿ ಮತ್ತು ಟಿ.ಕೆ.ಮಹಮ್ಮದಅಲಿ, ಅನುಭಾವಿ ಮೌನೇಶ ಗಾಡದ, ಖ್ಯಾತ ನಟ ನಿರ್ದೇಶಕ ಧ್ರುವರಾಜ ದೇಶಪಾಂಡೆ, ಕನ್ನಡ ಪಂಡಿತ ಮುರಡಿಯ ಆರ್.ಎಂ.ದೇಸಾಯಿ, ಬರಹಗಾರ ವಿ.ಸಿ.ಅಂಗಡಿ ಮತ್ತು ಸಂಗಮೇಶ ಬಾರಿಗಿಡದ, ನಿವೃತ್ತ ಪ್ರಾಚಾರ್ಯ ಎಲ್.ಎಚ್.ಕಲ್ಮಠ, ಸಂಶೋಧಕ ಡಾ.ಕಾಶಿನಾಥ ಮಠ, ಯುವ ರಂಗಕರ್ಮಿ ಮೆಹಬೂಬ ಝಂಡೇದ, ಉಪನ್ಯಾಸಕಿ ಆರ್.ಎಂ.ಅನ್ನಪೂರ್ಣ ಮುಂತಾದವರು ಇನ್ನೂ ಜೀವಂತವಾಗಿದ್ದಾರೆ.
ಒಂದು ವಿಚಾರದಲ್ಲಿ ಸಾಮಾನ್ಯ ಚುನಾವಣೆಯಲ್ಲಿ ಇಂತಹ ಪ್ರಮಾದಗಳು ಆಗುವುದುಂಟು. ಚುನಾವಣೆ ಯಲ್ಲಿ ಸತ್ತವರ ಹೆಸರಿನಲ್ಲಿ ಮತಹಾಕುವ ಸಾಹಸಗಳು ನಡೆದ್ದು ಇದೆ. ಈ ಚುನಾವಣೆಯಲ್ಲಿಯೂ ನಡೆದರೆ ಸೋಜಿಗಪಡಬೇಕಿಲ್ಲ.
ಇದಲ್ಲದೇ ಇನ್ನೂ ಅನೇಕರು ತಾವು ಬೇರೆಡೆಗೆ ಹೋದರೂ ಅವರ ಹೆಸರು ಇನ್ನೂ ಇಲ್ಲಿಯೇ ಇವೆ. ಅಧಿಕೃತ ಮತದಾರ ಪಟ್ಟಿಯ ಮೂಲದ ಪ್ರಕಾರ ಹುನಗುಂದ ತಾಲ್ಲೂಕಿನಲ್ಲಿ 732 ಮತಗಳಿವೆ.ಎರಡು ಅವಧಿಯ ಹಿಂದಿನ ಚುನಾವಣೆ ಕಾಲಕ್ಕೆ ತಮ್ಮ ಮತದಾನಕ್ಕೆ ಹೆಸರು ಬಿಟ್ಟಿದ್ದನ್ನು ಬಹಿಷ್ಕರಿಸಿದ ಮತದಾರರು ಈ ಬಾರಿ ತೊಂದರೆ ಪಡಬೇಕಿಲ್ಲ. ಅವರ ಹೆಸರುಗಳು ಬಂದಿವೆ.
ಮೇಲಿನ ಅವಘಡಗಳು ನಡೆಯಲು ಕಾರಣ ಏನು ಎಂದು ಕಾರಣ ಹುಡುಕಿದರೆ, ತಾಲ್ಲೂಕು ಮತ್ತು ಜಿಲ್ಲಾಧ್ಯಕ್ಷರು ತಮ್ಮ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮೃತಪಟ್ಟವರನ್ನು ಖಚಿತಪಡಿಸಿಕೊಂಡು ಅವರ ಸಂಬಂಧಿಗಳಿಂದ ಮರಣ ದಾಖಲೆ ಪಡೆದು ಮತದಾರ ಯಾದಿಯಿಂದ ಕಡಿಮೆಮಾಡಬಹುದಿತ್ತು. ಇಂತಹ ಮಹತ್ವದ ಕಾರ್ಯ ಮಾಡದೇ ಸಾರ್ವಜನಿಕ ವಲಯದಲ್ಲಿ ಪ್ರಜ್ಞಾವಂತರು ನಗುವಂತೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಜಗಜೀವನರಾಮ್ ಜಯಂತಿ ಆಚರಣೆ
ಹುನಗುಂದ : ಸಮೀಪದ ಅಮರವಾತಿ ಗ್ರಾಮ ಪಂಚಾಯತದಲ್ಲಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ ಜಯಂತಿಯನ್ನು ಅಧ್ಯಕ್ಷ ಮಹಾಂತೇಶ ಚಿತ್ತವಾಡಗಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದಸ್ಯ ಮಹಾಂತೇಶ ಹಿರೇಮಠ ಮತ್ತು ಮಾಜಿ ಉಪಾಧ್ಯಕ್ಷ ಆರ್. ಬಿ.ರಡ್ಡೇರ ಬಾಬೂಜಿ ಕುರಿತು ಮಾತನಾಡಿದರು.
ಸದಸ್ಯರಾದ ಶರಣಮ್ಮ ಕಂದಗಲ್ಲ, ದೊಡಬಸಪ್ಪ ಹೊಸಮನಿ, ಗೌರಮ್ಮ ಚಿತ್ತವಾಡಗಿ, ಮಹಾಂತೇಶ ಗೋಲಪ್ಪನವರ, ಹಿರಿಯ ಅಮಾತೆಪ್ಪ ಮಣ್ಣಕ್ಕಿ ಉಪಸ್ಥಿತರಿದ್ದರು. ಆದನಗೌಡ ಹಿರೇಅಮರೇಗೌಡರ ಸ್ವಾಗತಿಸಿದರು. ಎಸ್.ಜಿ. ಚಂದ್ರಗಿರಿ ನಿರೂಪಿಸಿದರು. ಟಿ.ಆರ್.ಬದಿನಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.