ADVERTISEMENT

ಕಾರ್ತಿಕೋತ್ಸವ: ಗಮನ ಸೆಳೆದ ವೀರಗಾಸೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:25 IST
Last Updated 20 ಡಿಸೆಂಬರ್ 2013, 6:25 IST

ಬನಹಟ್ಟಿ: ಸ್ಥಳೀಯ ವೀರಭದ್ರೇಶ್ವರ ಕಾರ್ತಿಕೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಬುತ್ತಿ ಪೂಜೆಯಲ್ಲಿ ವೀರಭದ್ರೇಶ್ವರ ಮೂರ್ತಿಯನ್ನು ಮಾಡಿದ್ದರು. ದೇವಸ್ಥಾನದ ಮುಂಭಾಗದಲ್ಲಿ ಅಗ್ಗಿಯನ್ನು ಮಾಡಲಾಗಿತ್ತು.

ಮಧ್ಯಾಹ್ನ ಮೆರವಣಿಗೆಯಲ್ಲಿ ಬಂದ ಪುರವಂತರು ಪಾಲಕಿಯ ಸಮೇತ ಅಗ್ಗಿಯನ್ನು ಪ್ರವೇಶ ಮಾಡಿದ ನಂತರ ಮಹಿಳೆ ಮತ್ತು ಪುರುಷರು ಅಗ್ಗಿಯನ್ನು ಹಾಯ್ದರು.

ನಂತರ ಸಂಜೆ ಪುರವಂತರ ವೀರಗಾಸೆ ಕಲೆಯನ್ನು ಈಶ್ವರಲಿಂಗ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐವತ್ತಕ್ಕೂ ಹೆಚ್ಚು ಪುರವಂತರು ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತ ದೇಹಕ್ಕೆ ಶಸ್ತ್ರಗಳನ್ನು ಹಾಕಿಕೊಂಡು ನೆರೆದ ಸಾವಿರಾರು ಜನರನ್ನು ರೋಮಾಂಚನಗೊಳಿಸಿದರು.

ಒಬ್ಬ ಪುರವಂತರು ಉದ್ದ ಮತ್ತು ದಪ್ಪನೆಯ ಸಲಾಕೆಯನ್ನು ತಮ್ಮ ತುಟಿಯ ಕೆಳ ಭಾಗದಿಂದ ಪೂರ್ತಿಯಾಗಿ ಹಾಕಿಕೊಂಡು ಹೊರ ತೆಗೆದು ನೆರೆದವರನ್ನು ಬೆರಗುಗೊಳಿಸಿದರು.

ಸಂಜೆ ಪಾಲಕಿ ಉತ್ಸವ ನಗರದ ಪ್ರಮುಖ ಬೀದಿಗಳನ್ನು ಸಂಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.