ADVERTISEMENT

ಗಣೇಶ ಉತ್ಸವಕ್ಕೆ ಅಡ್ಡಿ ಇಲ್ಲ: ವಿದ್ಯಾಸಾಗರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 7:22 IST
Last Updated 5 ಸೆಪ್ಟೆಂಬರ್ 2013, 7:22 IST

ಬಾಗಲಕೋಟೆ: `ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ಯಾರದೂ ಅಡ್ಡಿಯಿಲ್ಲ, ಆದರೆ, ಆಚರಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಆಗದಂತೆ ಎಚ್ಚರವಹಿಸಬೇಕು, ಧ್ವನಿವರ್ಧಕವನ್ನು ನಿಯಮಿತವಾಗಿ ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಬಳಸಬೇಕು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಗಜಾನನ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
`ಆಚರಣೆ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿದರೆ, ಅಹಿತಕರ ಘಟನೆಗಳು ನಡೆದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

`ಅಬ್ಬರದ ಧ್ವನಿವರ್ಧಕ ಹಾಕಿಕೊಂಡು ಅಶ್ಲೀಲವಾಗಿ ನೃತ್ಯ ಮಾಡುವುದು, ರಸ್ತೆ ನಡುವೆ ಪೆಂಡಾಲ್ ಹಾಕುವುದಾಗಲಿ, ರಸ್ತೆ ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ' ಎಂದರು.

ಜಿಲ್ಲಾಧಿಕಾರಿ ಮನೋಜ್ ಜೈನ್, ಗಣೇಶ ಉತ್ಸವವನ್ನು ಶಾಂತಿ, ಸೌಹಾರ್ದದಿಂದ ಆಚರಿಸುವಂತೆ ಗಣೇಶ ಉತ್ಸವ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ತಿಳಿಸಿದರು. 

`ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಗೆ ಅನುಕೂಲವಾಗಿಸಲು ಏಕಗವಾಕ್ಷಿಯಡಿ ಹೆಸ್ಕಾಂ, ನಗರಸಭೆ, ಪೊಲೀಸ್ ಇಲಾಖೆಯಿಂದ ಅನುಮತಿ ಒದಗಿಸಿಕೊಡಲಾಗುವುದು' ಎಂದರು.

`ಗಣೇಶನ ವಿಸರ್ಜನೆಗೆ ಮಹಾರುದ್ರಪ್ಪನ ಹಳ್ಳ ಮತ್ತು ಸಿಮೆಂಟ್ ಕ್ವಾರಿಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಸರ್ಜನೆಗೆ ನಗರದ ವಿವಿಧೆಡೆ 14 ಬಾವಿಗಳನ್ನು ಗುರುತಿಸಲಾಗಿದೆ' ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರಗೌಡ, ಉಪ ವಿಭಾಗಾಧಿಕಾರಿ ವಣಿಕ್ಯಾಳ, ತಹಶೀಲ್ದಾರ್ ಸಿ.ಎಚ್.ಪಾಟೀಲ, ಸಿಪಿಐ ಅನಿಲ ಭೂಮರೆಡ್ಡಿ, ನಗರಸಭೆ ಸದಸ್ಯ ರಾಜೇಂದ್ರ ಬಳೂಲಮಠ, ಗೀತಾ ಪತ್ತೇಪೂರ, ಗೋವಿಂದ ಬಳ್ಳಾರಿ, ಅಶೋಕ ಲಿಂಬಾವಳಿ, ನಾಗರಾಜ ಹದ್ಲಿ, ಶಿವಕುಮಾರ ಮೇಲ್ನಾಡ, ಸಂಜೀವ ವಾಡಕರ, ಎ.ಎ.ದಂಡಿಯಾ, ರಝಾಕ್ ಹಳ್ಳೂರ, ಬಸವರಾಜ ಯಂಕಂಚಿ, ಅಶೋಕ ಮುತ್ತಿನಮಠ ಸೇರಿದಂತೆ ವಿವಿಧ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.