ADVERTISEMENT

ನೇಕಾರರಿಗೆ ರಾಜಕೀಯ ಪ್ರಾತಿನಿಧ್ಯ: ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 8:10 IST
Last Updated 15 ಫೆಬ್ರುವರಿ 2012, 8:10 IST

ಬಾಗಲಕೋಟೆ: ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿ ನೇಕಾರ ಸಮುದಾಯ ವಿದ್ದರೂ ರಾಜಕೀಯವಾಗಿ ಪ್ರಾತಿನಿಧ್ಯ ದೊರೆತಿಲ್ಲ ಎಂದು ಕರ್ನಾಟಕ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಹೇಳಿದರು.
ನಗರದ ದಡ್ಡೇನವರ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿದರು.

ಬಾಗಲಕೋಟೆ ಜಿಲ್ಲೆಯೊಂದರಲ್ಲೇ 2ರಿಂದ 3 ಶಾಸಕರು ಮತ್ತು ಸಂಸದರು, ಅನೇಕ ಮಂದಿ ಜಿ.ಪಂ. ಮತ್ತು ತಾ.ಪಂ. ಸದಸ್ಯರ ಆಯ್ಕೆಗೆ ಅವಕಾಶ ಇದ್ದರೂ ಬೇರೆ ಸಮುದಾಯಗಳು ನೇಕಾರ ಸಮು ದಾಯದಲ್ಲಿ ಒಡಕು ಉಂಟು ಮಾಡುತ್ತಿರುವುದರಿಂದ ಆಯ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಲ್ಲಿ ಉಮಾಶ್ರಿ ಅವರು ನಡೆಸಿದ ಹೋರಾಟಕ್ಕೆ ನೇಕಾರ ಸಮುದಾಯದವರೇ ಸರಿಯಾಗಿ ಸ್ಪಂದಿಸದ ಕಾರಣ ಸೋಲುವಂತಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪಕ್ಷ ಯಾವುದೇ ಇರಲಿ ನೇಕಾರ ಸಮುದಾಯದ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ರಾಜ್ಯದ ಪ್ರತಿ  ಜಿಲ್ಲೆಯಲ್ಲೂ ಇರುವ ನೇಕಾರ ಸಮುದಾಯದ ಒಟ್ಟು 28 ಒಳಪಂಗಡಗಳನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ರಚಿಸಲಾಗಿದೆ ಎಂದರು.
ನೇಕಾರ ಸಮುದಾಯಗಳ ಒಕ್ಕೂ ಟವು ಕೇವಲ ಅನುವಂಶೀಯವಾಗಿ ನೇಕಾರಿಕೆ ಮಾಡಿಕೊಂಡು ಬರುತ್ತಿರುವ ಸಮುದಾಯಗಳ ಸಂಘಟನೆಯೇ ಹೊರತು ನೇಕಾರ ವೃತ್ತಿ ಮಾಡುತ್ತಿರುವ ಇತರೆ ಸಮುದಾಯಗಳಿಗೆ ಮೀಸ ಲಾದುದಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಇದುವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ನೇಕಾರ ಸಮುದಾಯದ ಬಗ್ಗೆ ಚಿಂತಿಸದ ಕಾರಣ ನೇಕಾರರು ತಮ್ಮ ವೃತ್ತಿಯಿಂದ ವಲಸೆ ಹೋಗುವಂತಾಗಿದೆ, ಅಲ್ಲದೇ ಆತ್ಮಹತ್ಯೆ ಮಾರ್ಗ ಹಿಡಿದಿದ್ದಾರೆ ಎಂದು ಹೇಳಿದರು.

ನೇಕಾರ ಸಮುದಾಯ ಅಭಿವೃದ್ಧಿ ಯಾಗಬೇಕಾದರೆ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಹಾಗೂ ಐಎಎಸ್ ನಂತಹ ಉನ್ನತ ಹುದ್ದೆಗಳಿಗೆ ಹೋಗಲು ಅವಕಾಶ ಕಲ್ಪಿಸಬೇಕು ಎಂದರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಮಾಶ್ರಿ ಮಾತನಾಡಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕ ವಾಗಿ ಪ್ರಗತಿ ಸಾಧಿಸಬೇಕಾದರೆ ನೇಕಾರ ಸಮುದಾಯದ ಎಲ್ಲಾ ಒಳಪಂಗಡಗಳು ಒಟ್ಟಾಗಬೇಕಾದ ಅಗತ್ಯವಿದೆ ಎಂದರು ಅಭಿಪ್ರಾಯಪಟ್ಟರು.

ಡಾ. ಎಂ.ಎಸ್.ದಡ್ಡೇನವರ, ಈರಣ್ಣ ಎಸ್. ಚಲ್ಮಿ, ಮಾಜಿ ಶಾಸಕ ಎಂ.ವಿ.ಬನ್ನಿ, ಶ್ರಿನಿವಾಸ ಬಳ್ಳಾರಿ, ಮುರಿಗೆಪ್ಪಾ ನಾರಾ, ಟಿ.ಎಂ. ಚೆಲ್ಲಾಳ, ರವೀಂದ್ರ ಕಲಬುರ್ಗಿ, ದುಂಡೆಪ್ಪ ಮಾಚಕನೂರ, ವೆಂಕಟೇಶ ಸಾಕಾ, ರಾಮಣ್ಣ ಹುಲಕುಂದ, ಮೀರಾ ಕಾಂಬಳೆ, ಡಾ. ಎಸ್.ಎಂ.ದಡ್ಡೇನವರ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.