ADVERTISEMENT

ಪ್ರಜಾ ಪರಿವರ್ತನ ಪಕ್ಷ ಉದಯ 9ಕ್ಕೆ

ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಚಾಲನೆ: ಮಹಾರಾಜನವರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 4:57 IST
Last Updated 5 ಅಕ್ಟೋಬರ್ 2017, 4:57 IST

ಬಾಗಲಕೋಟೆ: ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜಕೀಯಕ್ಕೊಂದು ಹೊಸ ದಿಕ್ಕು ನೀಡಲು ‘ಪ್ರಜಾ ಪರಿವರ್ತನ’ ಹೆಸರಿನ ಪಕ್ಷ ಸ್ಥಾಪನೆ ಮಾಡಲಾಗುತ್ತಿದೆ. ಇದೇ 9 ರಂದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ಅದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಪಕ್ಷದ ಜಿಲ್ಲಾ ಘಟಕದ ನಿಯೋಜಿತ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರ, ಶೋಷಣೆ, ದೌರ್ಜನ್ಯ ರಹಿತವಾದ ಸಮಾನ ಅವಕಾಶಗಳನ್ನು ಒಳಗೊಂಡ ಪ್ರಬುದ್ಧ ದೇಶ ನಿರ್ಮಾಣಕ್ಕಾಗಿ ಹೊಸ ಪಕ್ಷ ಸ್ಥಾಪನೆಗೆ ಮುಂದಾಗುತ್ತಿದ್ದೇವೆ. ಶೋಷಿತ ಸಮುದಾಯ ಈ ದೇಶದ ಆಳುವ ವರ್ಗ ಆಗಬೇಕು ಎಂಬುದನ್ನು ನನಸು ಮಾಡಲು ಪಕ್ಷ ಬದ್ಧವಾಗಿದೆ’ ಎಂದರು.

ಉದ್ಘಾಟನೆ ಕಾರ್ಯಕ್ರಮಕ್ಕೆ ಬಾಗಲಕೋಟೆಯಿಂದ ಸುಮಾರು ಐದು ಸಾವಿರ ಮಂದಿ ತೆರಳಲಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಸಾಮಾಜಿಕ ಚಳವಳಿಯ ಜೊತೆಗೆ ರಾಜಕೀಯ ಚಳವಳಿ ನಡೆಸುವ ಮೂಲಕ ಭ್ರಾತೃತ್ವದ ತಳಹದಿಯ ಮೇಲೆ ಶೋಷಣಾ ರಹಿತ ಪ್ರಬಲ ರಾಷ್ಟ್ರ ನಿರ್ಮಾಣಕ್ಕೆ ಪಕ್ಷ ರೂಪುಗೊಂಡಿದೆ ಎಂದರು.

ADVERTISEMENT

‘ಸರ್ಕಾರಗಳ ಆರ್ಥಿಕ ಯೋಜನೆಗಳು ಇಲ್ಲಿಯವರೆಗೂ ಶ್ರೀಮಂತರ ಪರವಾಗಿಯೇ ಬಂದಿವೆ ಹೊರತು ಬಡವರ ಹಾಗೂ ಶೋಷಿತರ ಪರವಾಗಿ ಅಲ್ಲ. ಕಳೆದ ಏಳು ದಶಕದಲ್ಲಿ ಬಡವ ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದೆ. ರೈತರು ಮತ್ತು ಕಾರ್ಮಿಕರ ಬದುಕು ಸಂಕಷ್ಟಕ್ಕೆ ತಲುಪಿದೆ. ತಳ ಸಮುದಾಯ ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರ ಬದುಕು ಶೋಚನೀಯವಾಗಿದೆ. ಮಹಿಳೆಯರ ಬದುಕು ಅಮಾನವೀಯವಾಗಿದೆ’ ಎಂದು ದೂರಿದರು.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕಾರ್ಯಪ್ರವೃತ್ತರಾಗಲು ಪಕ್ಷ ಮುಂದಾಗಲಿದೆ ಎಂದರು.

ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿರುವ ರಾಜಕೀಯ ಪಕ್ಷಗಳ ನೀತಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಉತ್ತಮವಾಗಿರುವ ಶೇ 15ರಷ್ಟು ಜನರ ಹಿತವನ್ನು ಮಾತ್ರ ಕಾಪಾಡುತ್ತಿವೆ. ದೇಶದ ಜನಸಂಖ್ಯೆಯ ಶೇ 85ಕ್ಕಿಂತ ಹೆಚ್ಚಿರುವ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಎಲ್ಲ ಸಮುದಾಯಗಳ ಅರ್ಧದಷ್ಟು ಜನ ಒಗ್ಗಟ್ಟಾದರೂ ಪಕ್ಷ ಪ್ರಬಲವಾದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

ಈ ಸಂದರ್ಭದಲ್ಲಿ ಆನಂದ ಜಾಲಗಾರ, ರಾಜೇಸಾಬ ಉಕ್ಕಲಿ, ಸದಾಶಿವ ಕೊಡಬಾವಿ, ಶಿವಪುತ್ರಪ್ಪ ದೊಡ್ಡಮನಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.