ಬನಹಟ್ಟಿ: ಇತ್ತೀಚೆಗೆ ಮುಕ್ತಾಯಗೊಂಡ ಚಿಮ್ಮಡ ಜಾತ್ರೆಗೆ ಸುತ್ತ ಮುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಜನ ಬಂದು ಅಲ್ಲಮಪ್ರಭುದೇವರಿಗೆ ನಮಸ್ಕರಿಸಿ, ಕಿಚಡಿ ಪ್ರಸಾದ ಸ್ವೀಕರಿಸಿ ಮರಳಿ ಹೋಗುವ ಸಂದರ್ಭದಲ್ಲಿ ಎಲ್ಲರ ಬಾಯಲ್ಲೂ ಒಂದೇ ಮಾತು `ಮೊದಲ ಸಲ ಚಿಮ್ಮಡ ಕಿನಾಲದಾಗ ನೀರಿಲ್ಲ...
`ನಾ ಕಳೆದ ಹದಿನೈದು ವರ್ಷಗಳಿಂದ ಚಿಮ್ಮಡ ಜಾತ್ರೆಗೆ ಬರುತ್ತಿರುವೆ, ನನ್ನ ಒಂದು ತಿಳಿವಳಿಕೆಯ ಪ್ರಕಾರ ಮೊದಲನೆ ಸಲ ಘಟಪ್ರಭಾ ಎಡದಂಡೆ ಕಾಲುವೆಗೆ ಜಾತ್ರೆಯ ಸಂದರ್ಭದಲ್ಲಿ ನೀರಿಲ್ಲ~ ಎಂದು ರಬಕವಿಯ ವಕೀಲ ವಿಜಯ ಹೂಗಾರ ಪತ್ರಿಕೆಗೆ ತಿಳಿಸಿದರು.
ಚಿಮ್ಮಡ ಗ್ರಾಮದ ಶಂಕರ ಬಟಕುರ್ಕಿ ಪತ್ರಿಕೆಯೊಂದಿಗೆ ಮಾತನಾಡಿ, `ನನಗ ತಿಳುವಳಿಕೆ ಬಂದಾಗಿಂದ ಈ ಕಾಲುವೆ ನೋಡಾಕ ಹತ್ತೇನ್ರಿ, ಆದರ ಪ್ರಭುಲಿಂಗೇಶ್ವರ ಜಾತ್ರೆಯ ಸಂದರ್ಭದಲ್ಲಿ ಕಾಲುವೆ ಯಾವಾಗಲೂ ತುಂಬಿ ಹರಿತಿತ್ತು. ಆದ್ರರ ಈ ಬಾರಿ ಎರಡು ದಾಖಲೆ. ಚಿಮ್ಮಡ ಜಾತ್ರೆಯೊಳಗ 140 ಕ್ವಿಂಟಲ್ ಕಿಚಡಿ ಮಾಡಿದ ಒಂದ ದಾಖಲೆಯಾದರ, ಎರಡನೇದು ಮೊದಲೇ ಸಲ ಕಾಲುವೆಯೊಳಗ ನೀರಿಲ್ಲದ ಖಾಲಿ ಬಿದ್ದಿರೋದು~ ಎಂದರು. ಪ್ರಭುದೇವರ ದರ್ಶನಕ್ಕೆ ಹೋಗಬೇಕಾದರೆ ಘಟಪ್ರಭಾ ಎಡದಂಡೆ ಕಾಲುವೆಯ ಸೇತುವೆ ದಾಟಿಕೊಂಡು ಹೋಗಬೇಕು.
ಕಳೆದ ಹತ್ತು ದಿನಗಳಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ನೀರನ್ನು ಬಂದು ಮಾಡಿದ್ದಾರೆ. ಇದರಿಂದಾಗಿ ಮಳೆಗಾಲದಲ್ಲಿ ಹರಿಯಬೇಕಾಗಿದ್ದ ಕಾಲುವೆ ಈಗ ಮಳೆ ಅಭಾವದ ಕಾರಣದಿಂದ ಈಗಲೇ ನೀರಿಲ್ಲದೆ ಸೊರಗಿದೆ. ಕಾಲುವೆಯ ನೀರನ್ನು ಆಧರಿಸಿ ವ್ಯವಸಾಯ ಮಾಡುತ್ತಿರುವ ರೈತರ ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಕಬ್ಬು ಒಣಗಿ ನಿಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.