ಬಾಗಲಕೋಟೆ: ಬಾಲಕಿಯನ್ನು ಬಲವಂತವಾಗಿ ಕೂಡಿಟ್ಟುಕೊಂಡು ಅತ್ಯಾಚಾರ ನಡೆಸಿದ ವ್ಯಕ್ತಿಗೆ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಏಳು ವರ್ಷ ಶಿಕ್ಷೆ ಹಾಗೂ ₹19 ಸಾವಿರ ದಂಡ ವಿಧಿಸಿ ಆದೇಶಿಸಿದೆ. ದೌರ್ಜನ್ಯಕ್ಕೆ ಸಹಕರಿಸಿದ ಆರೋಪಿಯ ಅಕ್ಕನಿಗೂ ₹10 ಸಾವಿರ ದಂಡ ವಿಧಿಸಲಾಗಿದೆ.
ಬಾದಾಮಿ ತಾಲ್ಲೂಕಿನ ಮತ್ತಿಕಟ್ಟಿ ಗ್ರಾಮದ ಮುತ್ತಪ್ಪ ಯಲ್ಲಪ್ಪ ಪೂಜಾರ ಹಾಗೂ ಆತನ ಅಕ್ಕ ಮಂಜುಳಾ ಶಿಕ್ಷೆಗೊಳಗಾದವರು.
ಮತ್ತಿಕಟ್ಟಿಯ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಉತ್ತರ ಕನ್ನಡ ಜಿಲ್ಲೆ ಕಾರವಾರದ ಅರ್ಜುನ ಕೋಟೆಯಲ್ಲಿರುವ ತನ್ನ ಅಕ್ಕನ ಮನೆಗೆ ಕರೆದೊಯ್ದ ಮುತ್ತಪ್ಪ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದನು. ನೊಂದ ಬಾಲಕಿ ತನ್ನನ್ನು ಮದುವೆಯಾಗುವಂತೆ ಕೇಳಿದಾಗ ಆರೋಪಿ ತನ್ನ ಸಹೋದರಿಯೊಂದಿಗೆ ಸೇರಿ ಆಕೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಈ ಬಗ್ಗೆ ಬಾಲಕಿ ಕೆರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಸಿದ್ದ ವೃತ್ತ ನಿರೀಕ್ಷಕ ಎ.ಎಸ್.ಗೂದಿಗೊಪ್ಪ ದೊಷಾರೋಪಣ ಪಟ್ಟಿ ಸಲ್ಲಿಸಿದ್ದರು. ಬಾಲಕಿಯ ಪರವಾಗಿ ಸರ್ಕಾರಿ ವಕೀಲ ಸುನಿಲ್ ಕಿರೇಸೂರ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.