ADVERTISEMENT

ಬೆಂಡಿಕಾಯಿ, ಟೊಮೆಟೊ ದರದಲ್ಲಿ ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 15:19 IST
Last Updated 24 ಜನವರಿ 2019, 15:19 IST
ಬಾಗಲಕೋಟೆಯಲ್ಲಿ ಗುರುವಾರ ನಡೆದ ಮಾರುಕಟ್ಟೆಯ ದೃಶ್ಯ 
ಬಾಗಲಕೋಟೆಯಲ್ಲಿ ಗುರುವಾರ ನಡೆದ ಮಾರುಕಟ್ಟೆಯ ದೃಶ್ಯ    

ಬಾಗಲಕೋಟೆ: ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಂಡಿಕಾಯಿ ಹಾಗೂ ಟೊಮೆಟೊ ಅವಕ ಕಡಿಮೆಯಾದ ಕಾರಣ ಈ ವಾರ ಎರಡೂ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.

ಕಳೆದ ವಾರಕ್ಕೆ ಹೊಲಿಸಿದರೆ ಈ ವಾರ ಕೆ.ಜಿಗೆ ₹10ರಿಂದ ₹15 ಏರಿಕೆ ಕಂಡಿದೆ. ಬೆಂಡೆಕಾಯಿ ಕೆ.ಜಿಗೆ ₹50ರಿಂದ ₹60ಕ್ಕೆ ಹಾಗೂ ಟೊಮೆಟೊ ಕೆ.ಜಿಗೆ ₹30ರಿಂದ ₹35 ಕ್ಕೆ ಮಾರಾಟವಾಗುತ್ತಿದೆ.

ಕಳೆದ 2ರಿಂದ 3 ವಾರಗಳಿಂದ ಮಾರುಕಟ್ಟೆಯಲ್ಲಿ ಬೆಂಡಿಕಾಯಿ ಹಾಗೂ ಟೊಮೆಟೊ ಅವಕ ಹೆಚ್ಚಾಗಿದೆ. ಅದರ ಪರಿಣಾಮ ದರ ಕಡಿಮೆಯಾಗಿತ್ತು. ಆದರೆ ಈ ವಾರ ಅವಕ ಕಡಿಮೆಯಾಗಿ ದರದಲ್ಲಿ ಏರಿಕೆಯಾಗಿದೆ. ಬೆಂಡೆಕಾಯಿ ಏರಿಕೆಯಿಂದ ಕೆಲವೊಬ್ಬ ಗ್ರಾಹಕರಿಗೆ ತೊಂದರೆಯಾಗಬಹುದು. ಆದರೆ, ಟೊಮೆಟೊ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ.

ADVERTISEMENT

ಸೌತೆ, ಮೆಣಸಿನಕಾಯಿ ದರ ಕಡಿಮೆ: ಚಿಲ್ಲರೆ ಮಾರುಕಟ್ಟೆಯಲ್ಲಿ ಸೌತೆಕಾಯಿ ₹25ರಿಂದ ₹30 ದರದಲ್ಲಿ ಮಾರಾಟವಾಗುತ್ತಿದ್ದರೆ (ಕಳೆದ ವಾರ ₹30ರಿಂದ ₹40 ಇತ್ತು). ಇನ್ನು ದಪ್ಪ ಮೆಣಸಿನಕಾಯಿ (ವಾರದ ಹಿಂದೆ ₹40ರಿಂದ ₹45 ಇತ್ತು), ಈ ವಾರ ₹30ರಿಂದ ₹40ಕ್ಕೆ ಮಾರಾಟವಾಗುತ್ತಿದೆ.

ಉಳಿದಂತೆಕ್ಯಾರೆಟ್ ₹45ರಿಂದ ₹50, ಗಜ್ಜರಿ ಕೆ.ಜಿಗೆ ₹40, ಬಟಾಣಿ ಕೆ.ಜಿಗೆ ₹50, ಬೀನ್ಸ್ ₹40ರಿಂದ ₹50, ಬದನೆಕಾಯಿ ₹40ರಿಂದ ₹50ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪಿನ ದರ ಸ್ಥಿರ: ಮೆಂತೆ ಪಲ್ಲೆ, ಈರುಳ್ಳಿ ತಪ್ಪಲು, ಕಿರಕಸಾಲಿ, ಹತ್ತರಕಿ, ಸಬ್ಬಸಗಿ ಸೊಪ್ಪು ಒಂದು ಕಂತೆಗೆ ₹10ರಿಂದ ₹15ಕ್ಕೆ ಮಾರಾಟವಾಗುತ್ತಿವೆ.

ಹಣ್ಣುಗಳ ದರ ಸ್ಥಿರ: ಇಲ್ಲಿನ ಮಾರುಕಟ್ಟೆಯಲ್ಲಿ ಸೇಬು ಕೆ.ಜಿ.ಗೆ ₹100ರಿಂದ ₹200ದರಕ್ಕೆ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆಹಣ್ಣು ಡಜನ್‌ಗೆ ₹40ರಿಂದ ₹50 ಕಳೆದ ವಾರದ ಬೆಲೆಯಲ್ಲಿಯೇ ಮಾರಾಟವಾದರೆ,ಮೂಸಂಬಿ ಕೆ.ಜಿಗೆ ₹60ರಿಂದ ₹70, ಚಿಕ್ಕು ₹70, ಅನಾನಸ್ ₹40ರಿಂದ ₹50ಕ್ಕೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಗಾತ್ರಕ್ಕೆ ತಕ್ಕಂತೆ ₹30ರಿಂದ ₹70ರವರೆಗೂ ದರ ಇದೆ.

ಕಳೆದ ವಾರದಿಂದ ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ಅವಕ ಹೆಚ್ಚಾಗಿದ್ದ ಪರಿಣಾಮ ಗಾತ್ರಕ್ಕೆ ಅನುಸಾರವಾಗಿ ₹20ರಿಂದ ₹40 ಕ್ಕೆ ಮಾರಾಟವಾಗುತ್ತಿವೆ.

ಈರುಳ್ಳಿ ಕೆ.ಜಿಗೆ ₹8 ರಿಂದ ₹9

ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ ₹8ರಿಂದ ₹9ರ ದರಲ್ಲಿ ಮಾರಾಟವಾಗುತ್ತಿದೆ.

‘ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದ್ದರಿಂದದರ ವಾರದಿಂದ ವಾರಕ್ಕೆ ಕುಸಿಯುತ್ತಿದೆ. ಇದರಿಂದ ರೈತರ ನಷ್ಟ ಹೊಂದುವ ಪರಿಸ್ಥಿತಿ ಎದುರಾಗಿದ್ದರಿಂದ ಅನೇಕ ರೈತರು ತಮ್ಮ ಜಮೀನಿನಲ್ಲಿಯೇ ಈರುಳ್ಳಿಯನ್ನು ಮುಚ್ಚುವಂತಾಗಿದೆ’ ಎಂದು ಬಾದಾಮಿ ತಾಲ್ಲೂಕಿನ ರೈತ ಗದಿಗ್ಯಪ್ಪ ಉಪ್ಪಾರ ಬೇಸರ ವ್ಯಕ್ತ ಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.