ಮುಧೋಳ: ದೇಶ ಸೇವೆ ಎಂದರೆ ಕೇವಲ ಸೇನೆಯಲ್ಲಿ ಸೇರುವುದಲ್ಲ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವ ಪ್ರತಿಯೊಂದು ಕಾರ್ಯವೂ ದೇಶ ಸೇವೆಯೇ ಆಗಿದೆ ಎಂದು ಭಾರತೀಯ ಸೇನೆಯ ಉಪಮಹಾ ದಂಡನಾಯಕ ರಮೇಶ ಹಲಗಲಿ ಅಭಿಪ್ರಾಯಪಟ್ಟರು.
ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಅವರು ನಾಗರಿಕರಿಂದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಿಮ್ಮ ಮಕ್ಕಳಲ್ಲಿ ಒಬ್ಬರನ್ನು ಸೇನೆಗೆ ಕಳಿಸಿ, ಭಾರತೀಯ ಸೇನೆ ಸಾಮಾನ್ಯವಲ್ಲ, ಜಗತ್ತಿನಲ್ಲಿಯೇ ಭಾರತೀಯ ಸೇನೆಗೆ ಉನ್ನತ ಸ್ಥಾನವಿದೆ. ನಿಮ್ಮ ದೇಶದ ಬಗ್ಗೆ ನೀವೆ ಹೆಮ್ಮೆ ಪಡದಿದ್ದರೆ ಬೇರೆ ದೇಶದವರು ಬಂದು ಹೆಮ್ಮೆಪಡಲು ಸಾಧ್ಯವೇ?. ಪ್ರತಿಯೊಬ್ಬರು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಮೇಶ ಹಲಗಲಿಯವರು ಉನ್ನತ ಸ್ಥಾನಕ್ಕೆ ಹೋಗಿರುವುದು ಮುಧೋಳಕ್ಕೆ ಮಾತ್ರ ಹೆಮ್ಮೆಯಲ್ಲ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಜು ಪಾಲೋಜಿ, ಉಪಾಧ್ಯಕ್ಷೆ ಇಂದಿರಾ ಗುಣದಾಳ, ಉದ್ಯಮಿ ಗುರುರಾಜ ಕಟ್ಟಿ, ಬಿ.ಜೆ.ಪಿ ಅಧ್ಯಕ್ಷ ಬಿ.ಎಚ್. ಪಂಚಗಾಂವಿ, ಸದಸ್ಯರಾದ ಮಾರುತಿ ಪವಾರ, ಪುಂಡಲೀಕ ಭೋವಿ, ಮಹಾದೇವ ಬಿದರಿ, ಕಮಲಾ ಜೇಡರ, ಪುರಸಭೆ ಮುಖ್ಯಾಧಿಕಾರಿ ರಮೇಶ ಸುಣಗಾರ, ಆಶ್ರಯ ಸಮಿತಿಯ ಕಲ್ಲಪ್ಪ ಸಬರದ ಉಪಸ್ಥಿತರಿದ್ದರು.
ಎಸ್.ಜಿ. ಬೆಳಕೋಡ ಸ್ವಾಗತಿಸಿದರು, ವಿ.ಜಿ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಜೋಶಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.