ADVERTISEMENT

ರಬಕವಿ- ಬನಹಟ್ಟಿ ನಗರದಲ್ಲಿ ನೀರಿಗಾಗಿ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:54 IST
Last Updated 5 ಏಪ್ರಿಲ್ 2013, 6:54 IST

ಬನಹಟ್ಟಿ: ಏಪ್ರಿಲ್‌ನಿಂದ ರಬಕವಿ ಬನಹಟ್ಟಿ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸದ್ಯ ಐದಾರು ದಿನಗಳಾದರೂ ನೀರು ಬಿಟ್ಟಿಲ್ಲ. ಇದರಿಂದಾಗಿ ಜನರು ನೀರಿಗಾಗಿ ಕೊಡ ಹಿಡಿದುಕೊಂಡು ಬೋರ್‌ವೆಲ್ ಮತ್ತು ಬಾವಿಗಳಿಗೆ ಅಲೆಯುವಂತಾಗಿದೆ. 

ಬೇಸಿಗೆಯಲ್ಲಿ ನೀರಿನ ತೊಂದರೆ ತಪ್ಪಿಸುವುದರ ಸಲುವಾಗಿ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದ್ದರೂ ಅದರ ಸಮರ್ಪಕ ಉಪಯೋಗವಾಗುತ್ತಿಲ್ಲ. ಅವಳಿ ನಗರಗಳಲ್ಲಿ ಹಲವಾರು ಬೋರ್‌ವೆಲ್‌ಗಳು ಕೆಟ್ಟು ನಿಂತಿವೆ. ಅವುಗಳ ದುರಸ್ತಿಯಾಗುತ್ತಿಲ್ಲ. ನದಿಯಲ್ಲಿಯ ನೀರು ಇನ್ನು ಒಂದು ಬಾರಿ ಮಾತ್ರ ಬಂದರೆ ಆಯ್ತು. ಅದು ಖಾಲಿಯಾಗುತ್ತದೆ.

ನಗರಸಭಾ ಸದಸ್ಯರ ವಿರೋಧದ ನಡುವೆಯೂ ಒಂದು ವರ್ಷಕ್ಕೆ  ರೂ 1440 ನೀರಿನ ಕರ ಪಡೆಯುತ್ತಿರುವ ನಗರಸಭೆಯವರು ಇಲ್ಲಿ ಒಂದು ವರ್ಷದಲ್ಲಿ 150 ದಿನವಾದರೂ ನೀರನ್ನು ಬಿಡಲಿ ಎಂಬುದು ಸಾರ್ವಜನಿಕರ ಆಗ್ರಹ.

ಚುನಾವಣೆಯ ನೆಪ: ನೀರಿನ ಬಗ್ಗೆ ಯಾವುದೇ ದೂರು ಬಂದರೂ ಅಧಿಕಾರಿಗಳು ಸದ್ಯ ಚುನಾವಣೆಯ ಸಮಯ. ಇದರಿಂದಾಗಿ ನಮ್ಮ ಬಹುತೇಕ ಅಧಿಕಾರಿಗಳು ಚುನಾವಣೆಯ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಮೀಟಿಂಗ್ ಹೋಗಿದ್ದಾರೆ ಎಂಬ ಮಾತುಗಳು ಅಧಿಕಾರಿಗಳಿಂದ ಕೇಳಿ ಬರುತ್ತಿವೆ.

ನಗರದಲ್ಲಿ ಹಲವಾರು ರೀತಿಯಲ್ಲಿ ನೀರು ದೊರೆಯುತ್ತದೆ. ಆದಷ್ಟು ಬೇಗನೆ ನಗರಸಭೆಯ ಅಧಿಕಾರಿಗಳು ಇತ್ತ ಕಡೆ ಗಮನ ನೀಡಿ ಕೂಡಲೇ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳವಂತಾಗಲಿ ಎಂಬುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.