ಬಾಗಲಕೋಟೆ: ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ‘ಹರ್ಷ ಎಂಟರ್ ಪ್ರೈಸಸ್’ ಹೆಸರಿನಲ್ಲಿ ನಡೆದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಜಿಲ್ಲೆಯಲ್ಲಿಯೂ ಹಲವರು ಹಣ ಕಳೆದುಕೊಂಡಿದ್ದಾರೆ ಎಂದು ಹೇಳ ಲಾಗುತ್ತಿದೆ.ಬಾಗಲಕೋಟೆ ನಗರ, ಶಿರೂರ, ಗುಳೇದಗುಡ್ಡ, ಕಲಾದಗಿ, ಮುಧೋಳದ ಹಲವರು ಹರ್ಷ ಎಂಟರ್ಪ್ರೈಸಸ್ನಲ್ಲಿ ಹೂಡಿಕೆ ಮಾಡಿದ್ದು, ₹ 10 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಅವ ರಲ್ಲಿ ಶಿಕ್ಷಕರು, ವ್ಯಾಪಾರಸ್ಥರು, ಪತ್ರಕರ್ತರು, ರೈತರು, ಸ್ವ–ಸಹಾಯ ಸಂಘಗಳ ಮಹಿಳೆಯರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯೂ ಇದ್ದಾರೆ ಎಂದು ತಿಳಿದುಬಂದಿದೆ.
ಇಲಾಖೆಗೂ ಮಾಹಿತಿ ಇದೆ: ‘ಹರ್ಷ ಎಂಟರ್ಪ್ರೈಸಸ್ನಲ್ಲಿ ಜಿಲ್ಲೆಯ ಗ್ರಾಹಕರು ಹಣ ತೊಡಗಿಸಿ ಕಳೆದು ಕೊಂಡಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ ಆ ಬಗ್ಗೆ ಇಲ್ಲಿಯ ವರೆಗೂ ಯಾವುದೇ ದೂರು ದಾಖಲಾ ಗಿಲ್ಲ. ಆ ಹಣಕಾಸು ಸಂಸ್ಥೆಯ ಶಾಖೆ ಬಾಗಲಕೋಟೆ ಜಿಲ್ಲೆಯಲ್ಲಿ ಇಲ್ಲ. ಹಾಗಾಗಿ ಯಾರೂ ಇಲ್ಲಿ ದೂರು ದಾಖಲಿಸಿಲ್ಲ. ಕಲಘಟಗಿಯಲ್ಲಿ ದೂರು ದಾಖಲಿಸಿ ದ್ದಾರೆ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳುತ್ತಾರೆ.
ಮಧ್ಯವರ್ತಿಗಳ ಮೂಲಕ ಹೂಡಿಕೆ: ‘ಹರ್ಷ ಎಂಟರ್ಪ್ರೈಸಸ್ನಲ್ಲಿ ಹೂಡಿಕೆ ಮಾಡಿದಲ್ಲಿ ಮಾಸಿಕ ಶೇ 4ರಷ್ಟು ಬಡ್ಡಿ ನೀಡಲಾಗುತ್ತಿತ್ತು. ಅದರಲ್ಲಿ ಶೇ 1ರಷ್ಟು ಮಧ್ಯವರ್ತಿಗಳಿಗೆ ಕಮಿಷನ್ ರೂಪದಲ್ಲಿ ಸಿಗುತ್ತಿತ್ತು. ಹಾಗಾಗಿ ಶಿಕ್ಷಕರು ಹಾಗೂ ಸಣ್ಣಪುಟ್ಟ ವ್ಯಾಪಾರ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದಾರೆ. ಕಲಘಟಗಿಯ ಖಾಸಗಿ ಶಾಲೆಯೊಂದರಲ್ಲಿ ನಮ್ಮೂರಿನ ಶಿಕ್ಷಕರೊಬ್ಬರು ಕೆಲಸ ಮಾಡುತ್ತಿದ್ದರು. ಅವರ ಮೂಲಕವೇ ನಮ್ಮೂರಿನಲ್ಲಿ ಹೆಚ್ಚಿನವರು ಹಣ ಹೂಡಿಕೆ ಮಾಡಿದ್ದಾರೆ ಎಂದು ಬಾಗಲಕೋಟೆ ತಾಲ್ಲೂಕು ಶಿರೂರಿನ ಯುವ ಕೃಷಿಕರೊಬ್ಬರು ಹೇಳುತ್ತಾರೆ.
‘ಆರಂಭದಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು ತಪ್ಪದೇ ಬಡ್ಡಿ ಹಣ ನೀಡಿ ವಿಶ್ವಾಸ ಗಳಿಸಿದರು. ನವೆಂಬರ್ ತಿಂಗ ಳಲ್ಲಿ ಅಧಿಕ ಮುಖಬೆಲೆಯ ನೋಟುಗಳು ರದ್ಧಾದ ನಂತರ ವಹಿವಾಟಿನಲ್ಲಿ ವ್ಯತ್ಯಾಸ ಆರಂಭವಾಯಿತು. ಹೆಚ್ಚಿನ ಬಡ್ಡಿ ಸಿಗುತ್ತಿದ್ದ ಕಾರಣ ಜಮೀನು ಮಾರಾಟ ಮಾಡಿ, ಪಿಂಚಣಿ, ನಿವೃತ್ತಿಯ ನಂತರ ಬಂದ ಹಣ, ಬೆಳೆ ಮಾರಿ ಬಂದ ಹಣವನ್ನು ತಂದು ಗ್ರಾಹಕರು ಹೂಡಿಕೆ ಮಾಡಿದ್ದಾರೆ. ಹಣ ಪಡೆದದ್ದಕ್ಕೆ ಬಿಳಿ ಚೀಟಿಯಲ್ಲಿ ಹಿಂಬರಹ ನೀಡಿದ್ದು ಬಿಟ್ಟಿರೆ ಬೇರೆ ದಾಖಲೆ ಇಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡುವುದಾದರೂ ಹೇಗೆ’ ಎಂದು ₹ 3 ಲಕ್ಷ ಹಣ ಹೂಡಿಕೆ ಮಾಡಿರುವ ಅವರು ಪ್ರಶ್ನಿಸುತ್ತಾರೆ.
‘ನಾನೂ ₹ 2 ಲಕ್ಷ ಕಳೆದುಕೊಂಡಿದ್ದೇನೆ. ಮಧ್ಯವರ್ತಿಯಾಗಿ ಕೆಲಸ ಮಾಡಿ ದ್ದವರು ಹಣ ಮರಳಿಸುವುದಾಗಿ ಹೇಳಿದ್ದಾರೆ. ಅವರ ಮೇಲೆ ವಿಶ್ವಾಸವಿದೆ. ಹಾಗಾಗಿ ದೂರು ಕೊಡುವ ಗೋಜಿಗೆ ಹೋಗಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪತ್ರಕರ್ತರೊಬ್ಬರು ತಿಳಿಸಿದರು.ಮೊದಲು ಅಲ್ಲಿ ಹಣ ಹೂಡಿಕೆ ಮಾಡಿದ್ದವರೇ ನಂತರ ಕಮಿಷನ್ ಕಾರಣಕ್ಕೆ ಮಧ್ಯವರ್ತಿಗಳಾಗಿ ಕೆಲಸ ಮಾಡಿ ಹಲವರಿಂದ ಹಣ ಕಟ್ಟಿಸಿದ್ದಾರೆ’ ಎಂದು ಅವರು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.