ಬಾಗಲಕೋಟೆ: ನೀರನ್ನು ಮಿತವಾಗಿ ಬಳಸಿಕೊಂಡು ಬೆಳೆ ಬೆಳೆಯುವದರೊಂದಿಗೆ ಆರ್ಥಿಕವಾಗಿ ಸದೃಢರಾಗಿ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ರೈತರಿಗೆ ಸಲಹೆ ನೀಡಿದರು.
ಮುಧೋಳ ತಾಲ್ಲೂಕಿನ ಶಿರೋಳ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿ, ಕೆರೆಯ ಉದ್ಘಾಟನೆಯಿಂದ ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿದೆ ಎಂದರು.
ನೀರನ್ನು ಸದುಪಯೋಗ ಪಡಿಸಿಕೊಂಡು ರೈತರು ಆರ್ಥಿಕವಾಗಿ ಪ್ರಗತಿ ಹೊಂದಬೇಕು. ನೀರನ್ನು ಸ್ವಚ್ಛವಾಗಿ ಇಡುವಲ್ಲಿ ಶ್ರಮಿಸಬೇಕು ಎಂದರು. ಶಿರೋಳ ಕೆರೆಯ ನಿರ್ಮಾಣದಿಂದ ಸುತ್ತಮುತ್ತಲಿನ 1.50 ಕಿ.ಮೀ ಬಾವಿ ಮತ್ತು ಬೋರವೆಲ್ಗಳಿಗೆ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ರೈತರು ಹೆಚ್ಚು ನೀರನ್ನು ಹೊಲಗಳಲ್ಲಿ ಹರಿಬಿಟ್ಟರೆ, ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಬಳಸಿದ ಗೊಬ್ಬರ, ಮಣ್ಣು ಮುಂತಾದವು ಹರಿದು ಹೋಗುವುದನ್ನು ತಡೆಗಟ್ಟಲು ನೀರನ್ನು ಮಿತವಾಗಿ ಬಳಸಿ ಎಂದರು.
ತಜ್ಞರ ಪ್ರಕಾರ ಮುಂಬರುವ 2020ರ ವೇಳೆಗೆ ಉತ್ತರ ಕರ್ನಾಟಕದ 8 ಜಿಲ್ಲೆಗಳು ಮರುಭೂಮಿಯಾಗಿ ಗೋಚರಿಸಲಿದೆಯಂತೆ. ಅದನ್ನು ಅರಿತುಕೊಂಡು ನೀರನ್ನು ಮಿತವಾಗಿ ಬಳಸಿ ಹೊಲಗಳಲ್ಲಿ ಒಡ್ಡು, ಹೊಂಡ ಮುಂತಾದವುಗಳನ್ನು ನಿರ್ಮಿಸಿ ಅಂತರ ಜಲಮಟ್ಟವನ್ನು ಹೆಚ್ಚಿಸಬಹುದಾಗಿದೆ, ಈ ನಿಟ್ಟಿನಲ್ಲಿ ರೈತರು ನೀರನ್ನು ಹಾಲಿನಂತೆ ಉಪಯೋಗಿಸಿ ಎಂದು ಹೇಳಿದರು.
ಅಂದಿನ ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಈ ಕೆರೆ ಕಾಲಾಂತರದಲ್ಲಿ ಬೇಸಾಯದ ಭೂಮಿಯಾಗಿ ಪರಿಣಮಿಸಿ ತದನಂತರ ವರ್ಷಗಳಲ್ಲಿ ಭೂಮಿಯನ್ನು ಕೆರೆ ನಿರ್ಮಾಣಕ್ಕೆ ನೀಡಿದ ರೈತರಿಗೆ ಅಭಿನಂದನೆ ಹೇಳಿದರು. ಕೆರೆ ನಿರ್ಮಾಣದ ಯೋಜನೆಯ ಅಂದಾಜು ಮೊತ್ತ ರೂ. 362 ಲಕ್ಷಗಳಾಗಿದ್ದು, ಕೆರೆಯಲ್ಲಿ ಸಂಗ್ರಹಿಸಲಾದ ನೀರಿನಿಂದ ಸುಮಾರು 90 ಹೆಕ್ಟೆರ್ ಜಮೀನಿನಲ್ಲಿ ಉತ್ತಮ ಫಸಲು ಬೆಳೆಯಬಹುದಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಬಿ.ಪಾಟೀಲ, ಶಿರೋಳ ಕೆರೆಯಲ್ಲಿ 9.45 ಎಂ.ಸಿ.ಎಫ್.ಡಿ ಹಾಗೂ 0.267 ಎಂ.ಸಿ.ಎಂ. ನೀರನ್ನು ಸಂಗ್ರಹಿಸಬಹುದಾಗಿದೆ ಎಂದರು.
ಕೆರೆಯಿಂದ ಶಿರೋಳ, ಸೋರಗಾಂವ. ಕುಳಲಿ ಹಾಗೂ ಮಳಲಿ ಗ್ರಾಮದ ರೈತರು ಫಲಾನುಭವಿಗಳಾಗಿರುತ್ತಾರೆ. ಈ ಕೆರೆಯ 918 ಮೀಟರ್ ಉದ್ದ, 7.86 ಮೀಟರ್ ಎತ್ತರ ಇದೆ ಎಂದರು.
ಆರ್.ಸಿ ತಳೇವಾಡ, ಶಿರೋಳ ಗ್ರಾ.ಪಂ. ಅಧ್ಯಕ್ಷ ತುಳಜಪ್ಪ ವಾಲಿಮರದ ಉಪಸ್ಥಿತರಿದ್ದರು. ಶಿರೋಳದ ರಾಮಾರೋಡಮಠದ ಮಹಾಸ್ವಾಮಿ ಶಂಕರಾ ರೂಡ ಸ್ವಾಮಿ ಸಾನ್ನಿಧ್ಯ ವಹಿ ಸಿದ್ದರು. ಐ.ಎಂ. ಹಳಂಗಳಿ ಸ್ವಾಗತಿಸಿದರು. ಅಶೋಕ ಜವಳಗಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.