ಬಾಗಲಕೋಟೆ: ನಗರದ ಶ್ರೀರಂಗನಾಥ ಅಂತರರಾಷ್ಟ್ರೀಯ ಶಾಲೆಯಲ್ಲಿ ಇದೇ 7ರಂದು ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ `ಅತ್ಯುತ್ತಮ ಶಿಕ್ಷಕ~ ಪ್ರಶಸ್ತಿ ವಿಜೇತ ಹುಲಿಕಲ್ ನಟರಾಜ ಅವರು `ಪವಾಡಗಳ ಸದೃಶ್ಯ~ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮೂಢನಂಬಿಕೆ ವಿರುದ್ಧ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಟರಾಜ್ ಅವರು, ಪವಾಡ ಮಾಡುವ ಬಗೆಯನ್ನು ಬಯಲುಗೊಳಿಸಲಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಡಾ. ರಘುವೀರ ಜಿ.ವಿ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪವಾಡ ಸದೃಶ್ಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರು ಭಾಗವಹಿಸಲು ಮುಕ್ತ ಅವಕಾಶ ಇರುವುದಾಗಿ ತಿಳಿಸಿದ ಅವರು, ಇದೇ ಸಂದರ್ಭದಲ್ಲಿ ಹುಲಿಕಲ್ ನಟರಾಜ ಅವರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸ್ಕೂಲ್ ಫಿಲ್ಮಂ ಪ್ರದರ್ಶನ: ಶ್ರೀರಂಗನಾಥ ಅಂತರರಾಷ್ಟ್ರೀಯ ಶಾಲೆಯಲ್ಲಿ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ತಿಂಗಳ ಪ್ರಥಮ ಶನಿವಾರ `ಸ್ಕೂಲ್ ಫಿಲ್ಮಂ~ ಅನ್ನು ಪ್ರದರ್ಶನ ಮಾಡುವುದಾಗಿ ತಿಳಿಸಿದರು.
ಬೆಂಗಳೂರಿನ ಎಜು ಮೀಡಿಯಾ ಸಂಸ್ಥೆ ಶೈಕ್ಷಣಿಕ ಉದ್ದೇಶಕ್ಕಾಗಿಯೇ ತಯಾರಿಸಿರುವ ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಸ್ಕೂಲ್ ಫಿಲ್ಮಂಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.
ಮಕ್ಕಳಿಗೆ ಚಿತ್ರಗಳ ಮೂಲಕ ನೈತಿಕ ಪಾಠದ ಜೊತೆಗೆ ಸಾಮಾಜಿಕ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಶಾಲೆಯ ಆಡಳಿತಾಧಿಕಾರಿ ಶ್ರೀರಂಗ ಖಾಸನೀಸ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.