ADVERTISEMENT

‘ಮುಳುಗದ ಸಾಂಪ್ರದಾಯಿಕ ಹೋಳಿ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:44 IST
Last Updated 17 ಮಾರ್ಚ್ 2014, 9:44 IST

ಬಾಗಲಕೋಟೆ: ಮುಳುಗಡೆಯೋತ್ತರ ಬಾಗಲ­ಕೋಟೆಯಲ್ಲಿ ಯಾವ ಹಬ್ಬದಾ­ಚರಣೆಗಳೂ ಮುಳುಗಿ ಹೋಗದಂತೆ ಹಿಂದಿನ ವೈಭವವನ್ನು ಕಾಯ್ದುಕೊಂಡು ಬರಲಾಗುತ್ತಿರುವುದಕ್ಕೆ ಸಾಂಪ್ರ­ದಾ­ಯಿಕ ಹೋಳಿ ಆಚರಣೆಯು ಉತ್ತಮ ಸಾಕ್ಷಿಯಾಗಿದೆ ಎಂದು ಸಾಹಿತಿ ಡಾ.ಪ್ರಕಾಶ ಖಾಡೆ ಹೇಳಿದರು.

ನಗರದ  ಐತಿಹಾಸಿಕ ವಲ್ಲಭಬಾಯಿ ಚೌಕಿ­ಯಲ್ಲಿ ಹೋಳಿ ಹಬ್ಬ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಹೋಳಿ ಹಬ್ಬ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿ ರಸ್ತೆ ವರ್ತಕರ ಸಂಘ, ಜ್ಯೋತಿಪ್ರಕಾಶ ಸಾಳುಂಕೆ ಅಭಿಮಾನಿಗಳ ಗೆಳೆಯರ ಬಳಗ, ಕಿಲ್ಲಾಗಲ್ಲಿ, ವಿದ್ಯಾಗಿರಿ, ನವನಗರಗಳ ಗೆಳೆಯರ ಬಳಗ, ಸುಭಾಶಚಂದ್ರ ಭೋಸ್‌ ಯುವಕ ಸಂಘ ಹೀಗೆ ಪ್ರತಿ­ಯೊಂದು ಬಡಾವಣೆಗಳಲ್ಲೂ ಗೆಳೆ­ಯರ ಬಳಗ ಕಟ್ಟಿಕೊಂಡು ಬಾಗಲ­ಕೋಟೆ ಹೋಳಿ ಆಚರಣೆಯ ಸಂಪ್ರದಾ­ಯವನ್ನು ಉಳಿಸಿಕೊಂಡು ಬಂದ ಕೀರ್ತಿ ಈ ನಗರಕ್ಕೆ ಸಲ್ಲುತ್ತದೆ ಎಂದರು.

ದೇಶದಲ್ಲಿಯೇ ಬಾಗಲ­ಕೋಟೆಯ ಹೋಳಿ ಆಚರಣೆಗೆ ಒಂದು ವೈಶಿಷ್ಟ್ಯ ಇದೆ. ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕೊಲ್ಕತ್ತಾ ದೇಶ­ದಲ್ಲಿಯೇ ಪ್ರಥಮ ಸ್ಥಾನ ಪಡೆದರೆ, ಐದು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಬಾಗಲಕೋಟೆ ಎರಡನೆಯ ಸ್ಥಾನದಲ್ಲಿದೆ ಎಂದರು.

ಭಾವೈಕ್ಯ ಮತ್ತು ಸಹೋದರತ್ವದ ಸಂಕೇತ­ವಾದ ಹೋಳಿಯನ್ನು ನಗರ­ದಲ್ಲಿ ಸರ್ವ ಧರ್ಮೀಯರೂ ಕೂಡಿ ಆಚರಿಸುತ್ತಿರುವುದು ಸೌಹಾರ್ದದ ಸಂಕೇತವಾಗಿದೆ ಎಂದರು.

ಸಾಂಪ್ರದಾಯಿಕ ಹಲಗೆ ನುಡಿಸುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಿದ ನಗರಸಭಾ ಅಧ್ಯಕ್ಷ ಸುರೇಶ ಕುದರಿಕಾರ ಮಾತನಾಡಿದರು.

ಹಿರಿಯರಾದ ಎನ್.ಆರ್. ಕುಲ­ಕರ್ಣಿ, ಬಾಗಲಕೋಟೆ ಹೋಳಿ ಆಚರಣಾ ಸಮಿತಿಗೆ ಮುಂದಿನ ವರ್ಷ ಇಪ್ಪತ್ತು ವರ್ಷಗಳು ತುಂಬಲಿದ್ದು ಸರ್ಕಾರದ ಸಹಯೋಗದೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸ­ಲಾ­ಗು­ವುದು ಎಂದರು.

ಟೀಕಿನಮಠದ ರೇವಣಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಕಳಕಪ್ಪಣ್ಣ ಬಾದೋಡಗಿ, ಸಂಗಣ್ಣ ಸರಗಣಾ­ಚಾರಿ, ರಮಾನಂದ ಕರಣೆ, ಶಂಕರ ತಪಶೆಟ್ಟಿ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ನಗರಸಭಾ ಸದಸ್ಯ ಸಂಜೀವ ವಾಡಕರ, ರಾಜು ನಾಯಕ  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಂಕಣಿ ಮತ್ತು ಯಲ್ಲಪ್ಪ ಕಟ್ಟಿಮನಿ ಹೋಳಿ ಹಾಡು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.