ADVERTISEMENT

ತ್ರಿವೇಣಿ ಸಂಗಮದಲ್ಲಿ ಮಿಂದ ಭಕ್ತರು

ಮಕರ ಸಂಕ್ರಮಣ ಪ್ರಯುಕ್ತ ಪುಣ್ಯ ಸ್ನಾನ; ಕೂಡಲ ಸಂಗಮದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 6:27 IST
Last Updated 15 ಜನವರಿ 2018, 6:27 IST
ಕೂಡಲಸಂಗಮದಲ್ಲಿ ಬಸವೇಶ್ವರರ ಐಕ್ಯಮಂಟಪಕ್ಕೆ ಭಕ್ತರು ಭೇಟಿ ನೀಡಿದರು
ಕೂಡಲಸಂಗಮದಲ್ಲಿ ಬಸವೇಶ್ವರರ ಐಕ್ಯಮಂಟಪಕ್ಕೆ ಭಕ್ತರು ಭೇಟಿ ನೀಡಿದರು   

ಕೂಡಲಸಂಗಮ: ಬಸವೇಶ್ವರರ ಐಕ್ಯ ಸ್ಥಳಕ್ಕೆ ಭಾನುವಾರ ಅಪಾರ ಭಕ್ತರು ಭೇಟಿ ನೀಡಿದರು. ಸಂಕ್ರಮಣ ಪ್ರಯುಕ್ತ ಪುಣ್ಯಸ್ನಾನದಲ್ಲಿ ಮಿಂದರು. ಧ್ಯಾನಸ್ಥರಾಗಿ ನಂತರ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ, ಪರಸ್ಪರ ಕುಸಿರೆಳ್ಳು ವಿನಿಮಯ ಮಾಡಿಕೊಂಡರು. ಭಾನುವಾರು ಬೆಳಿಗ್ಗೆ 6.40ಕ್ಕೆ  ಭಕ್ತರು ನದಿಯಲ್ಲಿ ಸ್ನಾನ ಮಾಡಿದರು. ಐಕ್ಯ ಸ್ಥಳಕ್ಕೆ 3ರಿಂದ 4ರವರೆಗೆ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಕೂಡಲಸಂಗಮ ಬಸವ ಧರ್ಮ ಪೀಠದ ಮಹಾಮನೆ ಆವರಣದಲ್ಲಿ ಭಾನುವಾರ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ನಡೆಯಿತು. ಶರಣ ಮೇಳಕ್ಕೆ ಬಂದ ಜನರು ಪಣ್ಯಸ್ನಾನ, ಇಷ್ಟ ಲಿಂಗಾರ್ಚನೆ, ಬಸವಾರ್ಚನೆಯಲ್ಲಿಪಾಲ್ಗೊಂಡರು.ನಂತರ ಗಣಲಿಂಗ ದರ್ಶನ, ಧ್ವಜಾರೋಹಣ ಮತ್ತು ಗುರುವಂದನೆ, ಸಮುದಾಯ ಪ್ರಾರ್ಥನೆ, ಕುಸುರೆಳ್ಳು ವಿನಿಮಯ, ವಚನ ಪಠಣ, ಬಸವ ಐಕ್ಯ ಮಂಟಪದ ದರ್ಶನ, ಪಥ ಸಂಚಲನ ಜರುಗಿದವು. ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಧ್ವಜಾರೋಹಣವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಮಾದೇಶ್ವರ ನೆರವೇರಸಿದರು.

ಧ್ವಜಾರೋಹಣದಲ್ಲಿ ಕೂಡಲ ಸಂಗಮ ಬಸವ ಧರ್ಮ ಪೀಠದ ಮಾತೆ ಮಹಾದೇವಿ, ಮಾತೆ ಗಂಗಾದೇವಿ, ಚನ್ನಬಸವಾನಂದ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಬಸವ ಕುಮಾರ ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಮಾತೆ ಬಸವರತ್ನಾ, ಮಾತೆ ಸತ್ಯಾದೇವಿ ಹಾಜರಿದ್ದರು.

ADVERTISEMENT

ಧ್ವಜಾರೋಹಣದ ನಂತರ ಗುರುವಂದನಾ ಕಾರ್ಯಕ್ರಮ ನಡೆಯಿತು. ನಂತರ ಮಾತನಾಡಿದ ಮಾತೆ ಮಹಾದೇವಿ, ಪುರೋಹಿತ ಶಾಹಿ, ಗುಡಿಶಾಹಿಯನ್ನು ಪ್ರತಿಭಟಿಸಿ ಜನ ಸಾಮನ್ಯರನ್ನು ದೇಗುಲದೊಳಗೆ ಕರೆದೊಯ್ದು ಪೂಜೆ ಮಾಡಿಸಿದ ದಿನ. ಎಲ್ಲ ಲಿಂಗಾಯತರು ಕೂಡಲಸಂಗಮಕ್ಕೆ ಬಂದು ಒಂಬತ್ತು ವಿಧಿಗಳಲ್ಲಿ ಪಾಲ್ಗೊಳಬೇಕು ಎಂದು ಅವರು ಹೇಳಿದರು.

ಚಿಕ್ಕಸಂಗಮದಲ್ಲಿ ಪುಣ್ಯಸ್ನಾನ
ಬೀಳಗಿ: ಇಲ್ಲಿನ ಕೃಷ್ಣಾ–ಘಟಪ್ರಭಾ ಅವಳಿ ನದಿಗಳ ಸಂಗಮವಾದ ಚಿಕ್ಕಸಂಗ ಮದಲ್ಲಿ ಭಾನುವಾರ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಸಹಸ್ರಾರು ಮಂದಿ ಭಕ್ತರು ಪುಣ್ಯಸ್ನಾನ ಮಾಡಿದರು. ನಂತರ ನೇರವಾಗಿ ಸರದಿಯಲ್ಲಿ ನಿಂತು ಚಿಕ್ಕಸಂಗಮನಾಥನ ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಬಂಧು ಬಳಗದವರೊಂದಿಗೆ ಕುಳಿತು ಸಾಮೂಹಿಕ ಭೋಜನ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.