ಬಾಗಲಕೋಟೆ: ಹಳೆಯ ಬಾಗಲಕೋಟೆ ನಗರ ಮಾಪನಕ್ಕೆ ಹೊಂದಿಕೊಂಡಿರುವ 8,940 ಎಕರೆ ಪ್ರದೇಶದ ಸರ್ವೆ ಕಾರ್ಯ ಪ್ರಾರಂಭಿಸಲಾಗಿದ್ದು, ವಾರದಲ್ಲಿ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ ತಿಳಿಸಿದರು.
ನಗರದಲ್ಲಿ ಬುಧವಾರ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಗಲಕೋಟೆಯ ನವನಗರ ಪ್ರದೇಶವು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದ್ದು, ಆಸ್ತಿಗಳ ಅಳತೆ ಮತ್ತು ಸೂಕ್ತ ಹಕ್ಕು ದಾಖಲೆಗಳ ನಿರ್ವಹಣೆ, ಆಸ್ತಿಗಳ ಕುರಿತು ಉಂಟಾಗುವ ವ್ಯಾಜ್ಯಗಳನ್ನು ಪರಿಹರಿಸಲು ಯುಪಿಒಆರ್ ಯೋಜನೆಯಡಿ ಡ್ರೋನ್ ತಂತ್ರಾಂಶ ಆಧಾರಿತ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಸೀಮಿಕೇರಿ, ಗದ್ದನಕೇರಿ, ಕೇಸನೂರ, ವೀರಾಪುರ, ಮುರನಾಳ, ಮುಚಖಂಡಿ, ಶೀಗಿಕೇರಿ ಗ್ರಾಮಗಳ ಜೊತೆಗೆ ಬಾಗಲಕೋಟೆಯೂ ಸರ್ವೆ ವ್ಯಾಪ್ತಿಯಲ್ಲಿದೆ. ಸರ್ವೆ ಕಾರ್ಯ ಮುಗಿದ ನಂತರ ಡ್ರಾಪ್ಟ್ ಪಿಆರ್ ಕಾರ್ಡ್ಗಳನ್ನು ನೀಡಲಾಗುವುದು. ಯಾವುದೇ ತಕರಾರು ಸ್ವೀಕೃತವಾಗದಿದ್ದಲ್ಲಿ ಅಂತಿಮ ಪಿ.ಆರ್ ಕಾರ್ಡ್ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಭೂ ದಾಖಲೆ ಉಪನಿರ್ದೇಶಕ ಮಹಾಂತೇಶ ಮುಳಗುಂದ ಮಾತನಾಡಿ, ಆಸ್ತಿಯ ಪ್ರಾಪರ್ಟಿ ಕಾರ್ಡ್ಗಳು ಆಸ್ತಿಯ ಮಾಲೀಕತ್ವವನ್ನು ನಿರೂಪಿಸುತ್ತವೆ. ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು, ತೆರಿಗೆ ಪಾವತಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಪಿ.ಆರ್.ಹೊಂದಿರಬೇಕಾಗುತ್ತದೆ ಎಂದರು.
ಬಿಟಿಡಿಎ ಪುನರ್ವಸತಿ ಪುನರ್ ನಿರ್ಮಾಣದ ಆಯುಕ್ತ ಗಣಪತಿ ಪಾಟೀಲ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್, ಎಡಿಎಲ್ಆರ್ ಸುರೇಶ ಕಿರಗಿ, ತಪಾಸಾಣಾಧಿಕಾರಿ ವಿ.ಎಸ್.ಕೂಡಗಿ, ಸರ್ವೆ ಕಾರ್ಯ ತಂಡದ ಚಿನ್ನಸ್ವಾಮಿ, ಅಭಿಷೇಕ, ಮುಕುಂದ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.