
ಬಾದಾಮಿ: ‘ಅಗಸ್ತ್ಯತೀರ್ಥ ದಂಡೆಯಲ್ಲಿರುವ 96 ಕುಟುಂಬಗಳ ಸ್ಥಳಾಂತರ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಹಂತ ಹಂತವಾಗಿ ನಿವೇಶನಗಳನ್ನು ವಿತರಿಸಲಾಗುವುದು ’ ಎಂದು ಬಾಗಲಕೋಟೆ ಉಪವಿಭಾಗ ಅಧಿಕಾರಿ ಸಂತೋಷ ಜಗಲಾಸರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಶಾಸಕ ಭೀಮಸೇನ ಚಿಮ್ಮನಕಟ್ಟಿ ನೇತೃತ್ವದಲ್ಲಿ ಸಭೆಗಳು ನಡೆದಿವೆ. ನಿವಾಸಿಗಳಿಗೆ 20/30 ಸೈಟ್ ಬದಲಾಗಿ 30/35 ಸೈಟ್ ಕೊಡುವ ಯೋಜನೆ ಇದೆ. ನಿವೇಶನದ ಅಪ್ರೂವಲ್ ಆದ ತಕ್ಷಣ ಹಂಚಿಕೆ ಮಾಡಲಾಗುವುದು ’ ಎಂದು ಅವರು ತಿಳಿಸಿದರು.
ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಎರಡು ದಶಕಗಳಿಂದ ಮನೆಗಳ ಸ್ಥಳಾಂತರ ಬಗ್ಗೆ ಬಾಗಲಕೋಟೆ ಮತ್ತು ಬಾದಾಮಿಯಲ್ಲಿ ಅನೇಕ ಬಾರಿ ಅಧಿಕಾರಿಗಳೊಂದಿಗೆ ನಿವಾಸಿಗಳ ಸಭೆಗಳು ನಡೆಸಿದ್ದನ್ನು ಸ್ಮರಿಸಬಹುದು.
ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಗಳು ನಡೆದು ಕೊನೆಯ ಹಂತ ತಲುಪಿದೆ ಎಂದು ತಿಳಿದಿದೆ.
‘ ಅಗಸ್ತ್ಯತೀರ್ಥ ದಂಡೆಯಲ್ಲಿರುವ 39 ಕುಟುಂಬಗಳು ಈಗಾಗಲೇ ಕಂದಾಯ ಇಲಾಖೆಗೆ ಸ್ಥಳಾಂತರಕ್ಕೆ ಒಪ್ಪಿಗೆ ಪತ್ರವನ್ನು ಕೊಟ್ಟು ಆರು ತಿಂಗಳಾಗಿದೆ. ಬೇಗ ಪರಿಹಾರ ಮತ್ತು ನಿವೇಶನ ಹಂಚಿಕೆ ಮಾಡಬೇಕು ’ ಎಂದು ಶಹಾಬುದ್ದೀನ ಮೋದಿನಸಾಬ್ ಸೌದಾಗರ ಒತ್ತಾಯಿಸಿದರು.
96 ಮನೆಗಳು ಸ್ಥಳಾಂತರವಾದರೆ ಮೇಣಬಸದಿ ಮತ್ತು ಮ್ಯೂಜಿಯಂ, ಭೂತನಾಥ ದೇವಾಲಯಕ್ಕೆ ಸಂಪರ್ಕ ರಸ್ತೆ ಕೈಗೊಂಡರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.