ಗುಳೇದಗುಡ್ಡ: ರಾಜ್ಯ ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ಘಟಕದ ಅಧ್ಯಕ್ಷೆ ಪಲ್ಲವಿ ಹಾಗೂ ಕೊರಮ ಕೊರಚ ಜನಾಂಗದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರಭಾವತಿ ಮೇಲೆ ಆದ ಹಲ್ಲೆಯನ್ನು ಖಂಡಿಸಿ ಅಖಿಲ ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕು ಘಟಕ ವತಿಯಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಇಬ್ಬರು ಮಹಿಳೆಯರ ಜನಪ್ರಿಯತೆ, ಪ್ರಾಮಾಣಿಕತೆ, ದಕ್ಷ ಆಡಳಿತ, ಪರಿಶ್ರಮದ ಸೇವೆ ಸಹಿಸದೆ ಹಲವು ಬಿಜೆಪಿ ಮುಖಂಡರು ಈ ರೀತಿ ಅವರ ಮೇಲೆ ಹಲ್ಲೆ ಮಾಡಿರುವುದು ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ನಡೆದ ರಾಜ್ಯದ ಅಲೆಮಾರಿ ಮುಖಂಡರ ಸಭೆಯಲ್ಲಿ ಕೊರಮ, ಕೊರಚ ಸಮಾಜದ ನಮ್ಮ ಮುಖಂಡರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ. ಸಮಾಜದಲ್ಲಿ 51 ಜಾತಿಗಿದ್ದು, ಕೇವಲ 49 ಜಾತಿ ಮುಖಂಡರನ್ನು ಸಭೆಗೆ ಕರೆದು ಸಭೆ ನಡೆಸಿರುವುದು ಇದು ಸರಿಯಾದ ಕ್ರಮವಲ್ಲ. ಇದನ್ನು ಪ್ರಶ್ನಿಸಿದಕ್ಕೆ ಈ ಇಬ್ಬರು ಸಮಾಜದ ಮಹಿಳೆಯರ ಮೇಲೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕು ಘಟಕದ ಎ.ಕೆ.ಎಂ.ಎಸ್. ರಾಜ್ಯ ಸಮಿತಿ ನಾಮನಿರ್ದೇಶಕ ಸದಸ್ಯ ಶಾಮಸುಂದರ್ ಕೊರವರ ಆಕ್ರೋಶ ವ್ಯಕ್ತಪಡಿಸಿದರು.
ಹುಚ್ಚೇಶ ಭಜಂತ್ರಿ, ಫಕೀರಪ್ಪ ತಳವಾರ, ರಾಮಣ್ಣ ಭಜಂತ್ರಿ, ಸುನಿಲಕುಮಾರ ಭಜಂತ್ರಿ, ಹನುಮಂತ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಬಸವರಾಜ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.