
ಕನ್ನಡ ಭಾವುಟ
ಬಾದಾಮಿ: ‘ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಕನ್ನಡ ಭಾಷೆಯ ಜಾಗೃತಿಗೆ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ’ ಎಂದು ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷ ಆರ್.ಬಿ. ಸಂಕದಾಳ ಹೇಳಿದರು.
2004ರಿಂದ ಆರಂಭಗೊಂಡ ತಾಲ್ಲೂಕು ಘಟಕದ ಸಾಹಿತ್ಯ ಸಮ್ಮೇಳನ 2026 ಮಾ.2 ರಂದು ನಡೆಯುವುದು. ಇದು 10ನೇ ಸಾಹಿತ್ಯ ಸಮ್ಮೇಳನವಾಗಿದೆ ಎಂದು ತಿಳಿಸಿದರು.
‘ತಾಲ್ಲೂಕು ಘಟಕದ ಸಾಹಿತ್ಯ ಸಮ್ಮೇಳನಕ್ಕೆ ಮೂರು ವರ್ಷಗಳಿಂದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರದಿಂದ ಅನುದಾನ ಬಂದಿಲ್ಲ. ಅನುದಾನದ ಕೊರತೆಯ ಮಧ್ಯದಲ್ಲಿಯೂ ಸಾರ್ವಜನಿಕರ ಸಹಕಾರದೊಂದಿಗೆ ಸಮ್ಮೇಳನ ನಡೆಸಲಾಗುತ್ತಿದೆ ’ ಎಂದು ಹೇಳಿದರು.
‘ಮಾ. 2ರಂದು ಬೆಳಿಗ್ಗೆ 8ಕ್ಕೆ ಪಿಕಾರ್ಡ ಬ್ಯಾಂಕ್ ಆವರಣದಿಂದ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಆವರಣದ ವರೆಗೆ ವಿವಿಧ ಜಾನಪದ ತಂಡದ ಕಲಾವಿದರೊಂದಿಗೆ ನಾಡದೇವಿ ಭುವನೇಶ್ವರಿತಾಯಿ ಭಾವಚಿತ್ರ ಮತ್ತು ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡುವರು’ ಎಂದು ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಫ್. ಹೊರಕೇರಿ ಹೇಳಿದರು.
ಬಸವ ಮಂಟಪದಲ್ಲಿ ಮಾ.2ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭಕ್ಕೆ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸುವರು. ಸಾಹಿತಿ ವೈ.ಎಂ. ಯಾಕೊಳ್ಳಿ ಸಮಾರಂಭವನ್ನು ಉದ್ಘಾಟಿಸುವರು. ಶಾಸಕ ಜೆ.ಟಿ. ಪಾಟೀಲ ಮಳಿಗೆಗಳ ಉದ್ಘಾಟನೆ ಮತ್ತು ಸಂಸದರಾದ ಪಿ.ಸಿ. ಗದ್ದಿಗೌಡರ, ನಾರಾಯಣ ಭಾಂಡಗೆ ಮತ್ತು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಕೃತಿಗಳ ಬಿಡುಗಡೆ ಮಾಡುವರು. ಸಮ್ಮೇಳನದ ಅಧ್ಯಕ್ಷ ಸಾಹಿತಿ ಜಿ.ಬಿ. ಶೀಲವಂತರ ಸಮ್ಮೇಳನದ ಕುರಿತು ಮಾತನಾಡುವರು. ಗೋಷ್ಠಿಗಳಲ್ಲಿ ತಾಲ್ಲೂಕಿನ ಸಾಹಿತ್ಯಾವಲೋಕನ, ಕವಿಗೋಷ್ಠಿ, ಬದುಕು ಬರಹ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಮಹಾಂತೇಶ ಈಳಗೇರ, ಆರ್.ಎಂ. ಸಾರವಾಡ, ಸಂಜಿವ ಬರಗುಂಡಿ, ವೀರೇಶ ಶೆಟ್ಟರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.