ಬಾದಾಮಿ ತಾಲ್ಲೂಕಿನ ಕೊನೆಯ ಸೀಮೆಯ ಬೆಟ್ಟದ ಮೇಲಿರುವ ಅನಂತಗಿರಿ ತಾಂಡೆಯ ಹದಗೆಟ್ಟ ರಸ್ತೆ
ಬಾದಾಮಿ: ಗುಡ್ಡದಮಲ್ಲಾಪುರ-ಅನಂತಗಿರಿ ತಾಂಡೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ವರ್ಷವಾದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿಯನ್ನು ಬೇಗ ಆರಂಭಿಸಿ ಜನರಿಗೆ ಅನುಕೂಲ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಯಿಂದ ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ₹1.76 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಈವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ತಾಂಡೆಯ ಭೀಮಪ್ಪ ಹೇಳಿದರು.
ತಾಲ್ಲೂಕಿನ ಕೊನೆಯ ಸೀಮೆಯಲ್ಲಿ ಬೆಟ್ಟದ ಮೇಲಿರುವ ಅನಂತಗಿರಿ ತಾಂಡೆಗೆ ರಸ್ತೆ ಸಲುವಾಗಿ ಎರಡು ದಶಕಗಳಿಂದ ಹೋರಾಟ ಮಾಡುತ್ತ ಬಂದಿರುವ ಗ್ರಾಮಸ್ಥರು 2018 ರಲ್ಲಿ ಚುನಾವಣೆ ಸಹ ಬಹಿಷ್ಕರಿಸಿದ್ದರು.
ಗುಡ್ಡದಮಲ್ಲಾಪುರ ಗ್ರಾಮದಿಂದ ಅನಂತಗಿರಿ ತಾಂಡೆ 3.5 ಕಿ.ಮೀ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಗೆ ₹1.76 ಕೋಟಿ ಮಂಜೂರಾಗಿದೆ.
‘ಅನಂತಗಿರಿ ತಾಂಡೆಯಿಂದ ನಿತ್ಯ 50ಕ್ಕೂ ಅಧಿಕ ವಿದ್ಯಾರ್ಥಿಗಳು ಬೇಲೂರು, ಬಾದಾಮಿ ಮತ್ತು ಗಜೇಂದ್ರಗಡ ಊರುಗಳ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ರಸ್ತೆ ಮತ್ತು ಬಸ್ ಸೌಕರ್ಯವಿಲ್ಲದೆ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸಿದ್ದಾರೆ ’ ಎಂದು ವಿದ್ಯಾರ್ಥಿ ಮುತ್ತಪ್ಪ ಹೇಳಿದರು.
‘ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲ ಮಾಡಿದ ಕಲ್ಲಿನ ರಸ್ತಾ ಎಲ್ಲಾ ಕಿತುಗೊಂಡು ಹಾಳಾಗಿ ಹೋಗೈತ್ರಿ. ಇಂಥದರಾಗ ಬಸ್ ಬರೂದಿಲ್ಲ. ಐವತ್ತಕ್ಕಿಂತ ಹೆಚ್ಚು ಹುಡುಗೂರ ಸಾಲಿ ಕಲಿಯಾಕ ಬ್ಯಾರೆ ಬ್ಯಾರೆ ಊರಿಗೆ ಹೊಕ್ಕಾರ. ರಸ್ತಾ ಮಾಡಿದರ ಬಸ್ ಬರತಾವ ಸಾಲಿ ಹುಡುಗರಿಗೆ ಮತ್ತ ಜನರಿಗೆ ಬರಾಕ ಹೋಗಾಕ ಅನುಕೂಲ ಆಗತ್ತರಿ ’ ಎಂದು ಮೇಘಪ್ಪ ಹೇಳಿದರು.
‘ನಿಮ್ಮ ಊರಿಗೆ ಎಲ್ಲಾ ಅನುಕೂಲ ಮಾಡಿಕೊಡಿತೀವಿ ಎಂದು ನಮ್ಮ ತಾಂಡೇಕ ಬಿ.ಎಸ್. ಯಡಿಯೂರಪ್ಪ ಮತ್ತ ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿಗಳು ಬಂದ ಹೋಗ್ಯಾರಿ ಯಾವಾಗ ರಸ್ತಾ ಆಗುತ್ತೋ ನಮಗ ತಿಳೀವಲ್ಲದು ’ ಎಂದು ವಿದ್ಯಾರ್ಥಿ ನಿಖಿಲ ಅಳಲು ತೋಡಿಕೊಂಡರು.
‘ರಸ್ತೆ ಬೆಟ್ಟದಲ್ಲಿ ಇರುವುದರಿಂದ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿಗೆ ರಾಜ್ಯ ಅರಣ್ಯ ಇಲಾಖೆಯ ಕಾರ್ಯದರ್ಶಿಗೆ ಪತ್ರವನ್ನು ಬರೆಯಲಾಗಿದೆ. ಒಪ್ಪಿಗೆ ಪತ್ರ ಬಂದ ಕೂಡಲೇ ಕಾಮಗಾರಿಯನ್ನು ಆರಂಭಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಫ್. ಆಡಿನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.