ಬಾದಾಮಿ: ನಗರ ಪ್ರದೇಶದ ವಸತಿ ರಹಿತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದ್ದರಿಂದ ಬಾಂಡ್ ಪೇಪರ್ ಪಡೆಯಲು ಬ್ಯಾಂಕ್ ಮುಂದೆ ಮತ್ತು ಅರ್ಜಿಯನ್ನು ಕೊಡಲು ಸೋಮವಾರ ಪುರಸಭೆಯಲ್ಲಿ ನೂಕುನುಗ್ಗಲು ಕಂಡು ಬಂತು.
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ(ನಗರ)-2.0 ಯೋಜನೆಯಲ್ಲಿ ಸರ್ವರಿಗೂ ಸೂರು ಒದಗಿಸಲು ನಿವೇಶನ ರಹಿತ ಮತ್ತು ವಸತಿ ರಹಿತರು ಆನ್ಲೈನ್ ಅರ್ಜಿ ಸಲ್ಲಿಸಲು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಿಳೆಯರು ಅರ್ಜಿ ಸಲ್ಲಿಸಲು ₹ 100 ಬಾಂಡ್ ಪೇಪರ್ ಪಡೆಯಲು ಬೆಳಿಗ್ಗೆ 8ಕ್ಕೆ ಪಿಕಾರ್ಡ್ ಬ್ಯಾಂಕ್ ಮುಂದೆ ನಿಲ್ಲುವರು. ಅರ್ಜಿ ಭರ್ತಿ ಮಾಡಿದ ಮೇಲೆ ಪುರಸಭೆಯಲ್ಲಿ ಮಹಿಳೆಯರು ಮತ್ತು ಪುರುಷರ ನೂಕುನುಗ್ಗಲು ಕಂಡು ಬಂದಿತು.
‘ಇರಾಕ ಮನಿ ಸಲುವಾಗಿ ಎರಡು ಮೂರು ವರ್ಸಗಳ ಹಿಂದೆ ಖರ್ಚು ಮಾಡಿ ಅರ್ಜಿ ಕೊಟ್ಟೀವಿ. ಏನೂ ಬರಲಿಲ್ಲ. ಈಗ ಮತ್ತ ಕಾಗದ ಪತ್ರ ತಯಾರ ಮಾಡಾಕ ₹ 560 ಖರ್ಚು ಮಾಡಿ ಅರ್ಜಿ ಕೊಟ್ಟೀವಿ. ಮನಿ ಬಂದಾಗ ಖರೆ ’ ಎಂದು ವೃದ್ಧೆ ಬಸಮ್ಮ ಹೇಳಿದರು.
ಜುಲೈ 14ರವರೆಗೆ 1,752 ಅರ್ಜಿಗಳು ಬಂದಿವೆ. ಜುಲೈ 31ರೊಳಗೆ ಪುರಸಭೆ ಸಿಬ್ಬಂದಿ ಪರಿಶೀಲನೆ ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.