ADVERTISEMENT

ಸಿದ್ದರಾಮಯ್ಯ ನೇತೃತ್ವದಲ್ಲೇ ಪಕ್ಷದ ಬಲವರ್ಧಿಸಿ: ರಾಹುಲ್‌ಗೆ ನಂಜಯ್ಯನಮಠ ಪತ್ರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 14:28 IST
Last Updated 25 ಜೂನ್ 2019, 14:28 IST
ಎಸ್.ಜಿ.ನಂಜಯ್ಯನಮಠ
ಎಸ್.ಜಿ.ನಂಜಯ್ಯನಮಠ   

ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೈ ಬಿಡದಂತೆಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ನಂಜಯ್ಯನಮಠ ಪತ್ರ ಬರೆದಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರದ ಪ್ರತಿ ಬಿಡುಗಡೆ ಮಾಡಿದ ನಂಜಯ್ಯನಮಠ, ‘ಈ ಎರಡೂ ಮಹತ್ವದ ಸ್ಥಾನಗಳಿಂದ ಸಿದ್ದರಾಮಯ್ಯ ಅವರನ್ನು ಕೈಬಿಡಲಾಗುತ್ತಿದೆ ಎಂಬ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಅದು ಸರಿಯಲ್ಲ. ಹೈಕಮಾಂಡ್ ಹಾಗೆ ನಿರ್ಧರಿಸಿದ್ದರೆ ಕೂಡಲೇ ಅದನ್ನು ಹಿಂದಕ್ಕೆ ಪಡೆಯಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.

ಸಿದ್ದರಾಮಯ್ಯ ಜನಮಾನಸದ ನಾಯಕ. ಅವರು ಕೇವಲ ಪಕ್ಷದ ಪದಾಧಿಕಾರಿಗಳು ಅಥವಾ ಕಾರ್ಯಕರ್ತರಿಗೆ ಪರಿಚಯವಿಲ್ಲ. ಬದಲಿಗೆ ಸಾಮಾನ್ಯ ಜನರಿಗೂ ಹತ್ತಿರವಿದ್ದಾರೆ.ಸಿದ್ದರಾಮಯ್ಯ ನೇತೃತ್ವದಲ್ಲಿ ಖಂಡಿತವಾಗಿಯೂ ಪಕ್ಷ ಮತ್ತೆ ಬಲಗೊಳ್ಳಲಿದೆ. ಲೋಕಸಭಾ ಚುನಾವಣೆಯಲ್ಲಿ ಆಗಿರುವ ಹಿನ್ನಡೆಯಿಂದ ಕಾಂಗ್ರೆಸ್ ಹೊರಬರಲು ಸಿದ್ದರಾಮಯ್ಯ ನಾಯಕತ್ವ ಅಗತ್ಯವಿದೆ ಎಂಬುದನ್ನು ನಂಜಯ್ಯನಮಠ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ADVERTISEMENT

ಅವಕಾಶ ಕೊಟ್ಟರೆ ನಿಭಾಯಿಸುವೆ: ಕೆಪಿಸಿಸಿ ಎಲ್ಲ ಸಮಿತಿಗಳನ್ನು ಪುನಾರಚನೆ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲ ಸ್ಥಾನಗಳೂ ಬದಲಾವಣೆ ಆಗಲಿವೆ ಎಂದು ತಿಳಿಸಿದ ನಂಜಯ್ಯನಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ. ಆದರೆ ಜಿಲ್ಲೆಯಲ್ಲಿ ಪಕ್ಷದ ನಾಯಕರು ಒಪ್ಪಿಗೆ ಸೂಚಿಸಿ ನನಗೆ ಜವಾಬ್ದಾರಿ ಕೊಡಲು ಮುಂದಾದರೆ ಒಪ್ಪಿಕೊಳ್ಳಲು ಸಿದ್ಧ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಗರಾಜ ಹದ್ಲಿ, ರಾಜು ಮನ್ನಿಕೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.