ಕುರಿಗಾಹಿಗಳಿಗಾಗಿ ಆಯೋಜಿಸಲಾಗಿರುವ ಬಂದೂಕು ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಉದ್ಘಾಟಿಸಿದರು. ಎಸ್.ಪಿ ಅಮರನಾಥ ರೆಡ್ಡಿ, ಸಿಇಒ ಶಶಿಧರ ಕುರೇರ ಪಾಲ್ಗೊಂಡಿದ್ದರು
ಬಾಗಲಕೋಟೆ: ‘ಕಠಿಣ ಸವಾಲಿನ ಜೀವನಶೈಲಿ ಹೊಂದಿರುವ ಕುರಿಗಾಹಿಗಳಿಗೆ ಆತ್ಮರಕ್ಷಣೆ ಅತ್ಯಂತ ಅಗತ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ನವನಗರದ ಪೊಲೀಸ್ ಮಂಗಲ ಭವನದಲ್ಲಿ ಕುರಿಗಾಹಿಗಳಿಗಾಗಿ ಆಯೋಜಿಸಲಾಗಿರುವ ಬಂದೂಕು ತರಬೇತಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕುರಿಗಾಹಿಗಳು ಮತ್ತು ಕುರಿಗಳ ರಕ್ಷಣೆಗೆ ಸಹಾಯವಾಗಲು ವಿಶೇಷ ಬಂದೂಕು ತರಬೇತಿ ಶಿಬಿರ ಆಯೋಜಿಸಿದ್ದು, ಕುರಿಗಾಹಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
‘ಮಳೆ, ಬಿಸಿಲು, ಗುಡ್ಡಗಾಡು ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ತಮ್ಮ ಕುರಿಗಳನ್ನು ಮೇಯಿಸುತ್ತಾರೆ. ಕುರಿಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ಮೇಯಿಸಲು ಹೋಗುವ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ಬಂದೂಕು ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯಲ್ಲಿ ಏಕಾಗ್ರತೆಯಿಂದ ಪಾಲ್ಗೊಂಡು ಉತ್ತೀರ್ಣರಾಗಿ, ಬಂದೂಕು ಪರವಾನಗಿಯನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.
‘ಬಂದೂಕನ್ನು ಜಾಗೃತೆಯಿಂದ ಇಟ್ಟುಕೊಳ್ಳಬೇಕು. ಅದು ಜೀವಕ್ಕೆ ಅಪಾಯ ತರಬಲ್ಲದು. ಫೋಟೋಗೆ ಇಲ್ಲವೇ ಪ್ರದರ್ಶನಕ್ಕಾಗಿ ಸ್ನೇಹಿತರಿಗೆ ಕೊಡಬಾರದು’ ಎಂದು ಅವರು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ‘ಏಪ್ರಿಲ್ 13ರ ವರೆಗೆ ನಡೆಯುತ್ತಿರುವ ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ಕುರಿಗಾಹಿಗಳು ಭಾಗವಹಿಸಿದ್ದಾರೆ. ಶಿಬಿರದಲ್ಲಿ ಗುರಿ ನಿಖರವಾಗಿ ಹೇಗೆ ಇಡಬೇಕು, ಬಂದೂಕು ಹಸ್ತಾಂತರಿಸುವ ವಿಧಾನ, ಕಾನೂನು ನಿಯಮಗಳು ಮತ್ತು ಶಿಸ್ತು ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿಯ ನಂತರ ಕಾಡು ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ದುರುಪಯೋಗ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಶಿಬಿರದಲ್ಲಿ ಮೂರು ಮಹಿಳೆಯರು ಸಹ ಭಾಗವಹಿಸಿದ್ದು, ತೇರದಾಳ ತಾಲ್ಲೂಕಿನ ಸಸಲಾಟ್ಟಿ ಗ್ರಾಮದ ಸಾಕ್ಷಿ ಎಂಬ ಯುವತಿಯು ವಿಶೇಷ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಕಾಶೀನಾಥ ಹುಡೇದ, ಹಾಲುಮತ ಸಮಾಜದ ರಾಜ್ಯ ಕಾರ್ಯದರ್ಶಿ ಸುವರ್ಣಾ, ತರಬೇತಿದಾರರು ಇದ್ದರು.
ಇದೇ ವೇಳೆ ಸೋಲಾರ್, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಅರಣ್ಯ ಪ್ರದೇಶಗಳಲ್ಲಿ ಕುರಿ ಮೇಯಲು ಮೀಸಲು ಅನುಮತಿ, ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ, ಸುರಕ್ಷಿತ ಪರಿಸರ ಹಾಗೂ ಕುರಿಗಾಹಿಗಳ ಹಕ್ಕುಗಳಿಗೆ ರಕ್ಷಣೆ ನೀಡುವ ಕಾಯ್ದೆ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರಿಗೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.