
ಬಾಗಲಕೋಟೆ: ನಗರದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 5ರಿಂದ ಮೂರು ದಿನ ಬಣ್ಣದಾಟ ಜರುಗಲಿದೆ.
ಹೋಳಿ ಹಬ್ಬದ ಪ್ರಯುಕ್ತ ಬುಧವಾರ ಅಂಬಾಭವಾನಿ ಸಮುದಾಯ ಭವನದಲ್ಲಿ ನಡೆದ ಹೋಳಿ ಆಚರಣಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮಾ.4ರಂದು ಕಾಮದಹನ ನಡೆಯಲಿದ್ದು, ಮಾ.4 ರಿಂದ8 ರವರೆಗೆ ಸೋಗಿನ ಬಂಡಿ ಪ್ರದರ್ಶನ ಜರುಗಲಿದೆ ಎಂದು ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ತಿಳಿಸಿದರು.
ಕಿರಣ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುರಾಯಿ ಹಲಗೆ ಬಾರಿಸುವವರನ್ನು ಆಯಾ ಓಣಿಗಳ ಹಿರಿಯರು ಮೊದಲೇ ಗೊತ್ತುಪಡಿಸಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವಂತೆ ತಿಳಿಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಾಬಲೇಶ್ವರ ಗುಡಗುಂಟಿ ಕಳೆದ ವರ್ಷದ ಸಭೆಯ ನಡುವಳಿಕೆಗಳನ್ನು ಓದಿ ಮಂಜೂರಿ ಪಡೆದರು. ಮಾ.3 ಹೋಳಿ ಆಚರಣಾ ಸಮಿತಿಯ ಉದ್ಘಾಟನಾ ಸಮಾರಂಭ ಜರುಗಲಿದೆ. ಅಂದಿನ ಸಮಾರಂಭದಲ್ಲಿ ಕಳೆದ ವರ್ಷ ಹೆಚ್ಚಿನ ಸೋಗಿನ ಬಂಡಿ ಮಾಡಿದ ಓಣಿಗಳಿಗೆ ನಗದು ಬಹುಮಾನ ನೀಡಲಾಗುವುದು.
ಹೋಳಿ ಹಬ್ಬದ ಪ್ರಯುಕ್ತ ನಡೆಸಲಾಗುವ ರೇನ್ ಡ್ಯಾನ್ಸ್ 10ನೇ ವರ್ಷದ್ದಾಗಿರುವುದರಿಂದ ಈ ಬಾರಿ ವಿಶೇಷವಾಗಿ ಆಚರಿಸಲು ರವಿ ಕುಮಟಗಿ ತಿಳಿಸಿದರು. ಸಹ ಕಾರ್ಯದರ್ಶಿ ಸಂಜೀವ ವಾಡಕರ, ವಿದ್ಯಾಗಿರಿ ಭಾಗದಲ್ಲಿ ಹೆಚ್ಚಿನ ಬಣ್ಣದ ಬಂಡಿಗಳನ್ನು ಮಾಡಲು ತಿಳಿಸಿದರು.
ಹೋಳಿ ಹಬ್ಬಕ್ಕೆ ಹೆಚ್ಚಿನ ಮೆರಗು ತರುವುದುಕ್ಕಾಗಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ಬಣ್ಣದಾಟದಲ್ಲಿ ಪಾಲ್ಗೊಳ್ಳಬೇಕು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕೆಂದು ನಾಗರಾಜ ಹದ್ಲಿ ಹೇಳಿದರೆ, ರಾಜು ನಾಯಕ ಪ್ರತಿಯೊಂದು ಓಣಿಗೂ ಹತ್ತತ್ತು ಸೇವಾ ಕಾರ್ಡಗಳನ್ನು ನೀಡಲು ಯೋಜಿಸಿದ್ದಾಗಿ ತಿಳಿಸಿದರು.
ವಿಜಯ ಸುಲಾಖೆ, ಶಿವು ಮೇಲ್ನಾಡ, ಶೈಲು ಅಂಗಡಿ, ಪ್ರವೀಣ ಖಾತೇದಾರ, ಪರಶುರಾಮ ಡಾವಣಗೇರಿ, ಈರಣ್ಣ ಕಲಬುರ್ಗಿ, ಕಾಂತು ಪತ್ತಾರ ಮತ್ತಿತರರು ಹಬ್ಬದ ಆಚರಣೆ ಕುರಿತು ಸಲಹೆಗಳನ್ನು ನೀಡಿದರು.
ಡಾ.ಶೇಖರ ಮಾನೆ, ಅಪ್ಪಣ್ಣ ಪೂಜಾರ, ಸಂಗಣ್ಣ ಕಾರಪುಡಿ, ರವಿ ಪಟಣ್ಣದ, ಶಂಕರ ತಪಶೆಟ್ಟಿ, ಉಮೇಶ ಹಂಚಿನಾಳ, ಕುಮಾರ ಗಿರಿಜಾ, ಬಂಡೆಪ್ಪ ಏಳೆಮ್ಮಿ, ಯಲ್ಲಪ್ಪ ಅಂಬಿಗೇರ, ನಾಗರಾಜ ದಳವಾಯಿ, ಶಂಕರ ನಾಯಕ, ಬಸವರಾಜ ಹೊನ್ನಳ್ಳಿ, ರಾಜು ಸಜ್ಜನ, ರಾಜು ಶಿಂತ್ರೆ, ಬಸವರಾಜ ನಾಶಿ, ಕೃಷ್ಣಾ ರಾಜೂರ, ರಾಜು ಗೌಳಿ, ಅನಿಲ ವಾಡಕರ, ಗಣೇಶ ಪತಂಗೆ, ವಿರೇಶ ಅವರಾದಿ, ಪವನ ಮುಕಾಶಿ, ರಾಜು ಬಾಸುತಕರ, ವಿನಾಯಕ ಹಾಸಲಕರ, ಈರಣ್ಣ ಮಮದಾಪೂರ, ಹನಮಂತ ಬಿಚೇಲಿ,ವಿಜಯ ಕಮತಗಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.