ಬಾಗಲಕೋಟೆ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ದೊಡ್ಡಹಂಪಿಹೊಳಿ ಬಳಿ ಹರಿಯುವ ಮಲಪ್ರಭಾ ನದಿಯ ಅಗಲ ಜಲಸಂಪನ್ಮೂಲ ಇಲಾಖೆ ಟೋಪೊಶೀಟ್ನಲ್ಲಿ 150 ಮೀಟರ್ ಇದೆ. ಆದರೆ ಈಗ ಅದು 10 ಮೀಟರ್ಗೆ ಇಳಿಕೆಯಾಗಿದೆ!
ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ರಸ್ತೆ ಸೇತುವೆ ಬಳಿ 100 ಮೀಟರ್ ಅಗಲವಿದ್ದ ನದಿ ಈಗ 11 ಮೀಟರ್ಗೆ ಕುಗ್ಗಿದೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ 200 ಮೀಟರ್ನಿಂದ 14 ಮೀಟರ್ಗೆ ರೂಪಾಂತರಗೊಂಡಿದೆ.
ಅತಿಯಾದ ಮಾನವ ಹಸ್ತಕ್ಷೇಪ ಹಾಗೂ ಒತ್ತುವರಿಯ ಪರಿಣಾಮ ಕೃಷ್ಣಾ ಕಣಿವೆಯ ಕಣ್ಣೀರಿನ ನದಿ ಎನಿಸಿದ ಮಲಪ್ರಭೆಗೆ ಅಸ್ತಿತ್ವಕ್ಕೆ ಈಗ ಕುತ್ತು ಬಂದಿದೆ.
ಟೋಪೋಶೀಟ್ನಲ್ಲಿನ ನದಿಯ ಅಳತೆ ಹಾಗೂ ಗೂಗಲ್ ಅರ್ಥ್ ನಕ್ಷೆಯ ಮೂಲಕ ಈಗಿನ ವಾಸ್ತವ ಚಿತ್ರಣವನ್ನು ಪಡೆದಿರುವಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ಮುಖ್ಯಎಂಜಿನಿಯರ್ ಕಚೇರಿ, ಅದನ್ನು ಆಧರಿಸಿ ನದಿಯ ಪುನಶ್ಚೇತನದ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ತಾತ್ಕಾಲಿತ ವರದಿ ಸಲ್ಲಿಸಿದೆ. ಅದರ ಪ್ರತಿ ’ಪ್ರಜಾವಾಣಿ’ಗೆ ಲಭ್ಯವಾಗಿದೆ.
10 ಸಾವಿರ ಕ್ಯೂಸೆಕ್ ಬಿಟ್ಟರೂ ಪ್ರವಾಹ
ನದಿಗೆ ಗರಿಷ್ಠ 1.85 ಲಕ್ಷ ನೀರು ಹರಿಸುವ ಸಾಮರ್ಥ್ಯದಲ್ಲಿ ಸವದತ್ತಿ ಬಳಿ ನಿರ್ಮಿಸಿರುವ ನವಿಲುತೀರ್ಥ ಜಲಾಶಯವನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ಅತಿಯಾದ ಒತ್ತುವರಿ ಹಾಗೂ ಮಾನವ ಹಸ್ತಕ್ಷೇಪದಿಂದಾಗಿ 10 ಸಾವಿರ ಕ್ಯೂಸೆಕ್ ನೀರು ಹರಿಸಿದರೂ ಪ್ರವಾಹ ಸ್ಥಿತಿ ಉಂಟಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಹುಟ್ಟಿ ಹುನಗುಂದ ತಾಲ್ಲೂಕು ಕೂಡಲಸಂಗಮ ಬಳಿ ಕೃಷ್ಣೆಯನ್ನು ಕೂಡುವ ಮಲಪ್ರಭಾ ನದಿ 306 ಕಿ.ಮೀ ಹರಿಯುತ್ತದೆ. ಟೋಪೊಶೀಟ್ ಪ್ರಕಾರ ನದಿ ಕನಿಷ್ಠ 50 ಮೀಟರ್ನಿಂದ ಗರಿಷ್ಠ 200 ಮೀಟರ್ವರೆಗೆ ಅಗಲವಿದೆ. ಆದರೆ ಈಗ ಅದರ ಅಗಲ ಬಹುತೇಕ ಕಡೆ 20 ಮೀಟರ್ಗಿಂತ ಕಡಿಮೆ ಆಗಿದೆ. ಬಾಗಲಕೋಟೆ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಲಾಶಯದ ಕೆಳಭಾಗದ ಸವದತ್ತಿ, ರಾಮದುರ್ಗ, ನರಗುಂದ, ರೋಣ, ಬಾದಾಮಿ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ 35 ಕಡೆ ಅತಿ ಹೆಚ್ಚು ಒತ್ತುವರಿ ಆಗಿದೆ ಎಂಬುದನ್ನು ನೀರಾವರಿ ನಿಗಮ ಗುರುತಿಸಿದೆ.
ಹೂಳು ತುಂಬಿರುವ ಕಾರಣ ನದಿಯ ಆಳ 1.5 ಮೀಟರ್ನಿಂದ 3 ಮೀಟರ್ವರೆಗೆ ಕುಗ್ಗಿದೆ. ಕೆಲವು ಕಡೆ ನದಿ ಸಮತಟ್ಟಾಗಿದ್ದು, ಗಿಡಗಂಟೆಗಳಿಂದ ಕೂಡಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಒತ್ತುವರಿ ಆಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ನದಿಯ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯವಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.