ಕಬ್ಬು ಕಟಾವು (ಸಾಂದರ್ಭಿಕ ಚಿತ್ರ)
– ಪ್ರಜಾವಾಣಿ ಚಿತ್ರ
ಬಾಗಲಕೋಟೆ: ರಾಜ್ಯ ಸರ್ಕಾರ ನಿಗದಿಪಡಿಸಿರುವ ಪ್ರಕಾರ ಜಿಲ್ಲೆಯ ನಾಯನೇಗಲಿಯಲ್ಲಿರುವ ಇಐಡಿ ಪ್ಯಾರಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮಾತ್ರ ಪ್ರತಿ ಮೆ.ಟನ್ ಕಬ್ಬಿಗೆ ₹3,300 ದೊರೆಯಲಿದೆ. ಉಳಿದ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವ ರೈತರಿಗೆ ಕಡಿಮೆ ದರ ದೊರೆಯಲಿದೆ.
2024–25ರಲ್ಲಿ ಕಾರ್ಖಾನೆಗಳ ಇಳುವರಿ ಆಧರಿಸಿ ಈ ಸಾಲಿನಲ್ಲಿ ಎಫ್ಆರ್ಪಿ ದರ ನಿಗದಿ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಶೇ11.25ರಷ್ಟು ಇಳುವರಿ ಹೊಂದಿರುವ ಕಾರ್ಖಾನೆಗಳು ₹3,300 ನೀಡಬೇಕು ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಇಐಡಿ ಪ್ಯಾರಿ ಕಾರ್ಖಾನೆಯ ಇಳುವರಿ ಶೇ11.87ರಷ್ಟಿದೆ. ಉಳಿದ ಕಾರ್ಖಾನೆಗಳ ಇಳುವರಿ ಶೇ11.25ಕ್ಕಿಂತ ಕಡಿಮೆ ಇದೆ.
ಶೇ10.25ರಷ್ಟು ಇಳುವರಿ ಹೊಂದಿರುವ ಕಾರ್ಖಾನೆಗಳು ಮೆ.ಟನ್ ಕಬ್ಬಿಗೆ ₹3,200 ನೀಡಬೇಕು ಎಂದು ಆದೇಶ ಹೊರಡಿಸಿದ್ದು, ಪ್ರತಿ ಕ್ವಿಂಟಲ್ನ ಶೇ0.1ರಷ್ಟು ಹೆಚ್ಚಳವಾದರೆ ₹1 ರೂ ನೀಡುವಂತೆ ತಿಳಿಸಲಾಗಿದೆ.
₹3,300 ದರದಲ್ಲಿ ಪ್ರಥಮ ಕಂತು ₹3,200 ಅನ್ನು ಸಕ್ಕರೆ ನಿಯಂತ್ರಣ ಕಾಯ್ದೆಯಡಿ ಕಬ್ಬು ಪೂರೈಸಿದ 14 ದಿನಗಳೊಳಗೆ ನೀಡಬೇಕು. ಉಳಿದ್ದರಲ್ಲಿ ಕಾರ್ಖಾನೆ ನೀಡುವ ₹50 ಹಾಗೂ ಸರ್ಕಾರದ ₹50 ಅನ್ನು ಆರು ತಿಂಗಳ ನಂತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
‘ರಾಜ್ಯ ಸರ್ಕಾರ ರಿಕವರಿ ಆಧರಿಸಿ ಬೆಲೆ ನಿಗದಿ ಮಾಡುವ ಮೂಲಕ ಗೊಂದಲ ಸೃಷ್ಟಿ ಮಾಡಿದೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ರೈತರಿಗೆ ಒಂದೇ ದರ ನಿಗದಿ ಮಾಡಬೇಕು. ಪ್ರತಿ ಮೆ.ಟನ್ ಕಬ್ಬಿಗೆ ₹3,500 ನಿಗದಿ ಮಾಡಬೇಕು’ ಎಂದು ರೈತ ಮುಖಂಡ ದುಂಡಪ್ಪ ಯರಗಟ್ಟಿ ಆಗ್ರಹಿಸಿದರು.
‘ಕೆಲವು ಕಾರ್ಖಾನೆಗಳು ಹಿಂದಿನ ವರ್ಷದ ಬಿಲ್ ಬಾಕಿ ಉಳಿಸಿಕೊಂಡಿವೆ. ಕೂಡಲೇ ಹಳೆ ಬಾಕಿಯನ್ನು ಪಾವತಿ ಮಾಡಬೇಕು. 2024–25ನೇ ಸಾಲಿನ ಎರಡನೇ ಕಂತಿನ ಬಿಲ್ ಅನ್ನು ಕೊಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.