
ಬಾಗಲಕೋಟೆ: ‘ಅನ್ಯಾಯದ ವಿರುದ್ಧ ಹೋಗಬೇಕಾಗಿದ್ದ ನಾವು ಫುಲೆ, ಬುದ್ಧ ಹಾಗೂ ಅಂಬೇಡ್ಕರ್ ಅವರುಗಳ ವಿರುದ್ಧ ಹೊರಟಿದ್ದೇವೆ. ವ್ಯವಸ್ಥೆ ವಿರುದ್ಧ ಹೋಗದೇ ಹೊಂದಾಣಿಕೆಗೆ ಮಣೆ ಹಾಕುತ್ತಿದ್ದೇವೆ. ಇದು ನಮ್ಮ ವೈಪಲ್ಯ. ಇನ್ಮುಂದೆ ಇಂತಹ ತಪ್ಪನ್ನು ಮಾಡಬೇಡಿ ಕರ್ನಾಟಕ ಬುದ್ಧ ಧಮ್ಮ ಸಮಿತಿಗಳ ಒಕ್ಕೂಟದ ಗೌರವಾಧ್ಯಕ್ಷ ಬಿ.ಗೋಪಾಲ ಹೇಳಿದರು.
ನವನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬೌದ್ಧ ವಿಹಾರ ನಿರ್ಮಾಣ ಸಂಸ್ಥೆ ಹಮ್ಮಿಕೊಂಡಿದ್ದ ಬುದ್ಧ ಧಮ್ಮ ಕುರಿತ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಾನ್ ಪುರುಷರು ಹೇಳಿದ ಮಾರ್ಗದಲ್ಲಿ ನಡೆಯಬೇಕು. ನಮ್ಮಲ್ಲಿ ಒಗ್ಗಟ್ಟು ಇರದಿರುವುದಕ್ಕೆ ಇಲ್ಲಿಯವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಸಮಯ ಸ್ಫೂರ್ತಿ ಇರುವರು ನಾಯಕರಾಗುತ್ತಾರೆ. ಸಮಯ ಪರಿಪಾಲನೆ ಮಾಡುವುದನ್ನು ಮೊದಲು ಕಲಿಯಬೇಕು ಎಂದು ಬಿ.ಆರ್. ಅಂಬೇಡ್ಕರ್ ಹೇಳಿದ್ದರು ಆ ದಿಸೆಯಲ್ಲಿ ಮುನ್ನಡೆಯಬೇಕಿದೆ’ ಎಂದರು.
‘ಬುದ್ದ ಗಯಾ ಮರಳಿ ಪಡೆಯಲು ಹೋರಾಟ ಮಾಡಲಾಗುತ್ತಿದೆ. ಫೆ.12ರಂದು ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಪ್ರಧಾನಿಗೆ ಮನವಿ ಸಲ್ಲಿಸಲಾಗುತ್ತಿದೆ’ ಎಂದರು.
ಉಪನ್ಯಾಸ ನೀಡಿದ ಶಿವಮೊಗ್ಗದ ಪ್ರೊ.ರಾಚಪ್ಪ ಮಾತನಾಡಿ, ‘ಅಂಬೇಡ್ಕರ್ ಅವರು ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಪುಸ್ತಕದಲ್ಲಿ ನಾವು ಮೂಲತಃ ಬೌದ್ಧರಾಗಿದ್ದೆವು ಎಂದು ಬರೆದಿದ್ದಾರೆ. ನಮ್ಮ ಸಂಸ್ಕೃತಿ ಹೈಜಾಕ್ ಮಾಡಿ ಬೇರೆಯವರು ಮುಂದುವರಿದಿದ್ದಾರೆ. ನಾವು ಇತಿಹಾಸ ಮರೆತು ಅವರ ಅಡಿಯಾಳಾಗಿ ಜೀವನ ಸಾಗಿಸುತ್ತಿದ್ದೇವೆ. ಭೌದ್ದ ಧರ್ಮ ಅನುಸರಿಸುತ್ತಿರುವ ರಾಷ್ಟ್ರಗಳ ಅಭಿವೃದ್ಧಿ ಹೊಂದಿವೆ ಎಂದರು.
ಕೊಳ್ಳೇಗಾಲ ಚೇತವನದ ಮನೋರ ರಕ್ಷಿತ ಬಂತೇಜಿ ಮಾತನಾಡಿ, ಬುದ್ಧ ಜ್ಞಾನೋದಯದ ಸಂಕೇತವಾಗಿದ್ದಾರೆ. ಅಂಬೇಡ್ಕರ್ ಅವರ ಪುಸ್ತಕ ಓದಿದರೆ ಅವರ ಜೊತೆ ಮಾತನಾಡಿದಂತಾಗುತ್ತದೆ. ಅವರ ಜ್ಞಾನ ಸಂಪತ್ತಿಗೆ ವಾರಸುದಾರರಾಗಬೇಕಿದೆ ಎಂದರು.
ಬಸವರಾಜ ಬದಾಮಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ವಿಶೇಷಾಧಿಕಾರಿ ಕುಲಪತಿ ಹಿಪ್ಪರಗಿ, ಜಯಪ್ರಕಾಶ ಬೀಳಗಿ, ಅನ್ನಪೂರ್ಣ ಹಿರೇಮನಿ ಅವರನ್ನು ಸನ್ಮಾನಿಸಲಾಯಿತು. ಪ್ರೇಮನಾಥ ಗರಸಂಗಿ, ಸದಾಶಿವ ಕೊಡಬಾಗಿ, ಸಂಜೀವಯ್ಯ ಕಾಂಬಳೆ, ಮಹೇಶ ಬೀಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.