
ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲಿನ ಕಲ್ಲು, ಚಪ್ಪಲಿ ತೂರಾಟ ಖಂಡಿಸಿ ಫೆ.26ರಂದು ‘ಬಾಗಲಕೋಟೆ ಚಲೋ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಹಿಂದೂ ಮುಖಂಡರು ಕರೆದಿದ್ದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡರ, ಗೋವಿಂದ ಕಾರಜೋಳ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಅರುಣ ಶಹಾಪುರ, ಮುಖಂಡರಾದ ಕಿರಣ ಪವಾಡಶೆಟ್ಟರ್, ಎಂ.ಆರ್.ಶಿಂಧೆ, ಅಶೋಕ ಲಿಂಬಾವಳಿ ಮತ್ತಿತರರು ಭಾಗಿಯಾಗಿದ್ದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಕೀಲ ಕಿರಣ ಪವಾಡಶೆಟ್ಟರ್ ಮಾತನಾಡಿ, ‘ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಿದರೆ ಸಾಲದು ಮಸೀದಿಯಲ್ಲಿ ಜಮಾಯಿಸಿದ್ದವರು, ಮಸೀದಿಯ ಮೌಲ್ವಿ ಹಾಗೂ ಸಮಿತಿಯ ಪದಾಧಿಕಾರಿಗಳನ್ನೂ ಬಂಧಿಸಬೇಕೆಂಬ ಬೇಡಿಕೆಯನ್ನಿಟ್ಟು ಗಡುವು ನೀಡಲಾಗಿತ್ತು. ಆದರೆ, ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅದಕ್ಕೇ ಪ್ರತಿಭಟನೆ ಮಾಡಲಾಗುತ್ತಿದೆ. ಅದೇ ಮಾರ್ಗದಲ್ಲಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮಾಡಲಾಗುವುದು’ ಎಂದರು.
ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ‘ಫೆ.26ರಂದು ಬೆಳಿಗ್ಗೆ 10ಕ್ಕೆ ಕಿಲ್ಲಾದ ಅಂಬಾಭವಾನಿ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ‘ವೀರಣ್ಣ ಚರಂತಿಮಠ ಅವರು ಐಜಿಪಿ ಹಾಗೂ ಎಸ್ಪಿಗೆ ಮಸೀದಿಗೆ ಬೀಗ ಜಡಿಯುವಂತೆ ಹೇಳಿದ್ದಾರೆ. ಸಚಿವ ತಿಮ್ಮಾಪುರ ಅವರಿಗೂ ಕ್ರಮ ಆಗದಿದ್ದರೆ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದೇವೆ. ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಲು ಬಿಡದಿದ್ದರೆ ನಾವೇ ಕೂಡಿಸುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದೇವೆ’ ಎಂದರು.
ಚಂದ್ರಶೇಖರ ಉಕ್ಕಲಿ, ಸುರೇಶ ಮಜ್ಜಿಗಿ, ವೀರಣ್ಣ ಹಳೇಗೌಡರ, ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ಸುರೇಶ ಕಟ್ಟಿಮನಿ, ಡಾ.ಶೇಖರ ಮಾನೆ, ಶಶಿಕಲಾ ಮಜ್ಜಗಿ ಮಾತನಾಡಿ, ಹಿಂದೂ ಕಾರ್ಯಕರ್ತರ ಬಂಧನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.