ರಾಂಪುರ: ಕಳೆದ ತಿಂಗಳು ಸುರಿದ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಈರುಳ್ಳಿ, ಹೆಸರು ಸೇರಿದಂತೆ ವಿವಿಧ ಬೆಳೆಗಳನ್ನು ಶಾಸಕ ಎಚ್.ವೈ. ಮೇಟಿ ಬುಧವಾರ ವೀಕ್ಷಿಸಿದರು.
ಬಾಗಲಕೋಟೆ ತಾಲ್ಲೂಕಿನ ತಿಮ್ಮಾಪೂರ, ಬಿಲ್ ಕೆರೂರ, ಸಂಗಾಪೂರ, ಭಗವತಿ ಹಾಗೂ ಅಚನೂರ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿದ ಮೇಟಿ, ಮಳೆಯಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ ಬೆಳೆ ವೀಕ್ಷಣೆ ಮಾಡಿದರು.
ಆಗಸ್ಟ್ ತಿಂಗಳಲ್ಲಿ ಹೆಚ್ಚುವರಿ ಮಳೆಯಾದ ಕಾರಣ ಈರುಳ್ಳಿ ಹಾಗೂ ಹೆಸರು ಬೆಳೆಗಳು ಕೆಲವೆಡೆ ಬಹುತೇಕ ಹಾನಿಗೊಳಗಾಗಿದ್ದು, ಕೆಲವೆಡೆ ಇಳುವರಿ ಕುಂಟಿತವಾಗಿದೆ ಎಂದು ರೈತರು ಹೇಳಿದರು.
ಹಾಗೆಯೇ ಹೆಚ್ಚಿನ ತೇವಾಂಶದಿಂದ ತೊಗರಿ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳದ ಬೆಳೆಗಳು ಹಾಳಾಗಿದ್ದು ಎಲ್ಲವನ್ನೂ ಶಾಸಕರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ವಾಯ್.ಮೇಟಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ಧನವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಡೆಸಲಿರುವ ಜಂಟೀ ಸಮೀಕ್ಷೆಯ ಆಧಾರದ ಮೇಲೆ ಪರಿಹಾರ ವಿತರಣೆಗೆ ಕ್ರಮವಹಿಸುವಂತೆ ಸೂಚಿಸಿದರು.
ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ, ಉಪ ಕೃಷಿ ನಿರ್ದೇಶಕ ಎಲ್.ಐ.ರೂಢಗಿ, ತಹಸೀಲ್ದಾರ ವಾಸುದೇವ ಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಗೀತಾ, ಉಪ ತಹಸೀಲ್ದಾರ ನೀಲೇಶ ಕರಡಿ, ಕಂದಾಯ ನಿರೀಕ್ಷಕರಾದ ಪ್ರಕಾಶ ನಾಯಕ ಮತ್ತು ವಿಜಯಪ್ರಕಾಶ ಅಳವಂಡಿ, ಗ್ರಾಮ ಆಡಳಿತಾಧಿಕಾರಿಗಳು, ಆಯಾ ಗ್ರಾಮಗಳ ಪ್ರಮುಖರು, ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.