ADVERTISEMENT

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ | ₹7.61 ಕೋಟಿ ನಿವ್ವಳ ಲಾಭ: ಅಜಯಕುಮಾರ ಸರನಾಯಕ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 3:19 IST
Last Updated 26 ಜುಲೈ 2025, 3:19 IST
ಅಜಯಕುಮಾರ ಸರನಾಯಕ
ಅಜಯಕುಮಾರ ಸರನಾಯಕ   

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹54.39 ಕೋಟಿ ಲಾಭ ಗಳಿಸಿದ್ದು, ಆದಾಯ ತೆರಿಗೆ ಹಾಗೂ ಇತರೆ ಅವಶ್ಯಕ ಶಾಸನಬದ್ಧ ಅನುವು ಕಲ್ಪಿಸಿದ ನಂತರ ₹7.61 ನಿವ್ವಳ ಲಾಭ ಗಳಿಸಿದೆ ಎಂದು ಬಿಡಿಸಿಸಿ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹221.48 ಕೋಟಿ ಷೇರು ಬಂಡವಾಳವಿದ್ದು, ಈ ಆರ್ಥಿಕ ವರ್ಷ ₹235 ಕೋಟಿ ಷೇರು ಸಂಗ್ರಹಿಸುವ ಗುರಿ ಹೊಂದಲಾಗಿದೆ. ₹370 ಕೋಟಿ ನಿಧಿ ಹೊಂದಿದ್ದು, ಈ ವರ್ಷ ₹417 ಕೋಟಿ ಗುರಿ ಹೊಂದಲಾಗಿದೆ ಎಂದರು.

₹3,857 ಕೋಟಿ ಠೇವಣಿ ಹೊಂದಿದ್ದು, ₹4,250 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ₹612 ಕೋಟಿ ಸ್ವಂತ ಬಂಡವಾಳ ಹೊಂದಿದ್ದು, ₹5,705 ಕೋಟಿ ದುಡಿಯುವ ಬಂಡವಾಳವಿದೆ. ಒಟ್ಟು ₹7,487 ಕೋಟಿ ವ್ಯವಹಾರದೊಂದಿಗೆ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ. ಬ್ಯಾಂಕ್ ಲಾಭದಲ್ಲಿದ್ದು, 2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಂತೆ ‘ಎ’ ಗ್ರೇಡ್ ಶ್ರೇಣಿ ಲಭಿಸಿದೆ ಎಂದು ಹೇಳಿದರು.

ADVERTISEMENT

ಬ್ಯಾಂಕಿನಿಂದ 2,54,191 ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹1,375 ಕೋಟಿ ಬೆಳೆಸಾಲ ನೀಡಲಾಗಿದೆ. ಈ ವರ್ಷ 1,093 ರೈತರಿಗೆ ಶೇ3 ರಷ್ಟು ಬಡ್ಡಿ ದರದಲ್ಲಿ ₹65.80 ಕೋಟಿ ಕೃಷಿ ಚಟುವಟಿಕೆಗಳಾದ ಪೈಪ್‌ಲೈನ್, ಪಂಪ್‌ಸೆಟ್, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಭೂ ಅಭಿವೃದ್ಧಿ, ತೋಟಗಾರಿಕೆ ಬೆಳೆ ರೇಷ್ಮೆ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಸಾಲಗಳನ್ನು ನೀಡಲಾಗಿದೆ ಎಂದರು.

ಮುಂದಿನ ವರ್ಷಕ್ಕೆ ₹1,600 ಕೋಟಿ ಸಾಲ ವಿತರಿಸಲು ಗುರಿ ಹೊಂದಲಾಗಿದೆ. ಗ್ರಾಮೀಣ ಭಾಗದ ಗ್ರಾಹಕರಿಗೆ ಅನುಕೂಲವಾಗಲು ಚಿನ್ನಾಭರಣದ ಮೇಲಿನ ಸಾಲ ನೀಡುವ ಬಡ್ಡಿ ದರನ್ನು ಶೇ12 ರಿಂದ ಶೇ10ಕ್ಕೆ ಇಳಿಸಲಾಗಿದೆ. ಇದರಿಂದ 100 ಕೋಟಿಯಷ್ಟು ಬಂಗಾರ ಸಾಲದ ಪ್ರಮಾಣ ಹೆಚ್ಚಾಗಿದೆ ಎಂದರು.

₹285.47 ಕೋಟಿ ಕೃಷಿಯೇತರ ಸಾಲ, ₹1,552 ಕೋಟಿ ಔದ್ಯೋಗಿಕ ಸಾಲ ನೀಡಲಾಗಿದೆ. ₹3,630 ಕೋಟಿ ಸಾಲ ಬಾಕಿ ಇದೆ. ಮೊಬೈಲ್ ಬ್ಯಾಂಕ್, ಯುಪಿಐ ಆಧಾರಿತ ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಬ್ಯಾಂಕಿನ 57 ಶಾಖೆಗಳು ಪೈಕಿ 10 ಶಾಖೆಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಸ್ವಂತ ನಿವೇಶನ ಹೊಂದಿದ 8 ಶಾಖೆಗಳ ಪೈಕಿ 4 ಶಾಖೆಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ನಿರ್ದೇಶಕರಾದ ಹಣಮಂತ ನಿರಾಣಿ, ಪ್ರಕಾಶ ತಪಶೆಟ್ಟಿ ಇದ್ದರು.

ರೈತರ ಬಡ್ಡಿ ಪಾವತಿ

ಬಾಗಲಕೋಟೆ: ಬೆಳೆಸಾಲ ಪಡೆದು ದೀರ್ಘಾವಧಿವರೆಗೆ ಮರು ಪಾವತಿಸದೇ ಸುಸ್ತಿಯಾಗಿದ್ದ 4009 ರೈತರ ₹6.24 ಕೋಟಿ ಬಡ್ಡಿಯನ್ನು ಬ್ಯಾಂಕ್‌ ಪಾವತಿಸಿದೆ ಎಂದು ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು. ಸುಸ್ತಿಯಾಗಿದ್ದ ರೈತರ ₹33 ಕೋಟಿ ಸಾಲ ಬಾಕಿ ಉಳಿದಿತ್ತು. ಬಡ್ಡಿ ಸಹಾಯ ಧನ ಯೋಜನೆಗೆ ಅನರ್ಹರಾಗಿದ್ದರು. ಅವರಿಗೆ ನೆರವು ನೀಡಲು ಬಡ್ಡಿ ಪಾವತಿಸಲಾಗಿದೆ. ಅದರಲ್ಲಿ ಈಗ ₹24.24 ಕೋಟಿ ಸಾಲ ವಸೂಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.