ಬಾಗಲಕೋಟೆ: ಲಕ್ಷ್ಮಿ ಪೂಜೆಗೆ ಬೇಕಾದ ವಸ್ತುಗಳ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿದೆ. ಕೆಲವು ವಸ್ತುಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದರೂ ಜನರು ಖರೀದಿಗೆ ಮುಗಿಬಿದ್ದಿದ್ದಾರೆ.
ವಿದ್ಯಾಗಿರಿ ವೃತ್ತ, ಎಲ್ಐಸಿ ವೃತ್ತ, ಬಾಗಲಕೋಟೆಯ ಸಂತೆ ಬಜಾರ್ ಸುತ್ತ–ಮುತ್ತಲ ಪ್ರದೇಶದಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡಲು ಎಂದೇ ಚೆಂಡು ಹೂ ಅನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಕೆಲ ರೈತರು ಹೊಲದಲ್ಲಿಯೇ ಹೂ ಗಳ ಮಾರಾಟ ಮಾಡಿದ್ದರೆ, ಇನ್ನು ಕೆಲವರು ಟ್ರ್ಯಾಕ್ಟರ್ನಲ್ಲಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.
ಪ್ಲಾಸ್ಟಿಕ್ ಹೂ, ಹಾರಗಳ ಹಾವಳಿ ಹೆಚ್ಚಾಗಿರುವುದರ ನಡುವೆಯೂ ಜನರು ನಿಸರ್ಗದತ್ತವಾದ ಹೂವುಗಳ ಖರೀದಿ ಮಾಡುತ್ತಿದ್ದಾರೆ. ಚೆಂಡು ಹೂ ಪ್ರತಿ ಕೆಜಿಗೆ ₹80ರಿಂದ 100 ಕ್ಕೆ ಮಾರಾಟ ಮಾಡಲಾಗುತ್ತಿದೆ. ಸೇವಂತಿ ಕೆಜಿಗೆ ₹200, ಗುಲಾಬಿ ಕೆಜಿಗೆ ₹250ಕ್ಕೆ ಮಾರಾಟವಾಗುತ್ತಿವೆ. ಹೂವುಗಳ ಹಾರಗಳಿಗೆ ಬೇಡಿಕೆ ಹೆಚ್ಚಿದ್ದು, ದರದಲ್ಲಿಯೂ ಅಲ್ಪ ಹೆಚ್ಚಳವಾಗಿದೆ.
ಪೂಜೆ ಸಂದರ್ಭದಲ್ಲಿ ಕುಂಬಳಕಾಯಿ ಒಡೆಯುವುದು ಸಾಮಾನ್ಯ. ಅಂಗಡಿ ಪೂಜಾಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಕುಂಬಳಕಾಯಿ ಮಾರಾಟ ಜೋರಾಗಿದೆ. ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಬಾಳೆದಿಂಡು, ಕಬ್ಬು ಮಾರಾಟವೂ ಜೋರಾಗಿದೆ. ಜೋಡಿ ಬಾಳೆದಿಂಡನ್ನು ಎತ್ತರದ ಆಧಾರದ ಮೇಲೆ ಬೆಲೆ ನಿಗದಿ ಮಾಡಿ, ಮಾರಾಟ ಮಾಡಲಾಗುತ್ತಿದೆ.
ಪೂಜೆಗೆ ಐದು ಬಗೆಯ ಹಣ್ಣುಗಳನ್ನು ಇಡುವುದರಿಂದ ಹಣ್ಣುಗಳ ಮಾರಾಟವೂ ಜೋರಾಗಿದೆ. ಸೇಬು, ಬಾಳೆಹಣ್ಣು, ಸೀತಾಫಲ, ಚಿಕ್ಕು, ಪೇರಲ ಸೇರಿದಂತೆ ವಿವಿಧ ಹಣ್ಣುಗಳ ಮಾರಾಟ ನಡೆಯುತ್ತಿದೆ. ಹಣ್ಣುಗಳು ಕೆಜಿ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಐದು ಬಗೆಯ ಎರಡು ಹಣ್ಣುಗಳನ್ನು ಸೇರಿಸಿ ಪೂಜೆಗೆಂದೇ ಮಾರಾಟ ಮಾಡಲಾಗುತ್ತಿದೆ.
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪಟಾಕಿಗಳನ್ನು ಹಚ್ಚುತ್ತಾರೆ. ಪಟಾಕಿ ಅಂಗಡಿಗಳಲ್ಲಿಯೂ ಜನದಟ್ಟಣೆ ಹೆಚ್ಚಾಗಿದೆ. ಕಳೆದ ಬಾರಿಗಿಂತ ಬೆಲೆ ಹೆಚ್ಚಳವಾಗಿದ್ದರೂ ಖರೀದಿ ನಡೆಸಿದ್ದಾರೆ.
‘ಬೆಲೆ ಹೆಚ್ಚಳವಾಗಿದೆ ಎಂದು ಹಬ್ಬವನ್ನು ನಿಲ್ಲಿಸುವಂತಿಲ್ಲ. ದೀಪಾವಳಿ ದೊಡ್ಡ ಹಬ್ಬವಾಗಿರುವುದರಿಂದ ಜೋರಾಗಿಯೇ ಮಾಡುತ್ತಿದ್ದೇವೆ’ ಎಂದು ಮಂಜುಳಾ ಪಾಟೀಲ ಹೇಳಿದರು.
ದೀಪಾವಳಿ ಬೆಳಕಿನ ಹಬ್ಬವಾಗಿರುವುದರಿಂದ ಮನೆ ಮುಂದೆ ಹಣತೆಗಳನ್ನು ಹಚ್ಚಿಡಲಾಗುತ್ತದೆ. ಬಗೆ, ಬಗೆಯ ಹಣತೆಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳ ಖರೀದಿಯೂ ಜೋರಾಗಿದೆ.
ಚೆಂಡು ಹೂ ಪ್ರತಿ ಕೆಜಿಗೆ ₹80ರಿಂದ 100ಕ್ಕೆ ಮಾರಾಟ ಸೇವಂತಿ ಕೆಜಿಗೆ ₹200 ಮಾರಾಟ ಗುಲಾಬಿ ಕೆಜಿಗೆ ₹250ಕ್ಕೆ ಮಾರಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.