ADVERTISEMENT

ಬಾಗಲಕೋಟೆ | ದೂಳು, ಕೆಸರುಮಯ ನವನಗರ ಬಸ್‌ ನಿಲ್ದಾಣ

ಜಿಲ್ಲಾ ಕೇಂದ್ರದಲ್ಲಿನ ನಿಲ್ದಾಣದ ದುಃಸ್ಥಿತಿ; ಪ್ರಯಾಣಿಕರಿಗೆ ತೊಂದರೆ

ಬಸವರಾಜ ಹವಾಲ್ದಾರ
Published 13 ಸೆಪ್ಟೆಂಬರ್ 2025, 6:41 IST
Last Updated 13 ಸೆಪ್ಟೆಂಬರ್ 2025, 6:41 IST
ಬಾಗಲಕೋಟೆ ನವನಗರದ ಬಸ್‌ ನಿಲ್ದಾಣದಲ್ಲಿ ಡಾಂಬರು ಕಿತ್ತು ಹೋಗಿರುವುದು
ಬಾಗಲಕೋಟೆ ನವನಗರದ ಬಸ್‌ ನಿಲ್ದಾಣದಲ್ಲಿ ಡಾಂಬರು ಕಿತ್ತು ಹೋಗಿರುವುದು   

ಬಾಗಲಕೋಟೆ: ನವನಗರದ ಬಸ್‌ ನಿಲ್ದಾಣಕ್ಕೆ ನಿತ್ಯ ನೂರಾರು ಬಸ್‌ಗಳು ಬರುತ್ತವೆ. ನಿಲ್ದಾಣ ಒಂದು ಭಾಗದ ಡಾಂಬರ್‌ ಸಂಪೂರ್ಣವಾಗಿ ಕಿತ್ತು ಹೋಗಿದೆ.

ಬಿಸಿಲು ಬಿದ್ದರೆ ದೂಳು, ಮಳೆಯಾದರೆ ಕೆಸರಿನ ಸಿಂಚನ ಆಗುತ್ತದೆ. ಬಸ್‌ ಹತ್ತಲು, ಇಳಿಯಲು ಪರದಾಡಬೇಕಾದ ಸ್ಥಿತಿ ಇದೆ.

ಇಳಕಲ್‌, ರಾಯಚೂರು, ಮುದ್ದೇಬಿಹಾಳ, ಗುಳೇದಗುಡ್ಡ, ಬಾದಾಮಿ, ಕೂಡಲಸಂಗಮ ಸೇರಿದಂತೆ ಹಲವು ಊರುಗಳಿಗೆ ತೆರಳುವ ಬಸ್‌ಗಳು ಈ ಭಾಗದಲ್ಲಿ ನಿಲ್ಲುತ್ತವೆ. ನಿತ್ಯ ಸಾವಿರಾರು ಜನರು ಈ ನಿಲ್ದಾಣದಿಂದಲೇ ಪ್ರಯಾಣಿಸುತ್ತಾರೆ.

ADVERTISEMENT

ಯೋಜನಾಬದ್ಧವಾಗಿರಲಿಲ್ಲ: ಈ ಮೊದಲು ಮಾಡಿದ್ದ ಡಾಂಬರ್ ಯೋಜನಾಬದ್ಧವಾಗಿರಲಿಲ್ಲ. ಬಸ್‌ ನಿಲ್ಲುವಲ್ಲಿ ಎತ್ತರವಾಗಿದ್ದು, ಉಳಿದೆಡೆ ಇಳಿಜಾರಿನಲ್ಲಿರಬೇಕಾಗಿತ್ತು. ಆಗ ಮಳೆ ನೀರು ಹರಿದು ಹೊರಗಡೆ ಹೋಗುತ್ತಿತ್ತು. ಆದರೆ, ಇಲ್ಲಿ ಬಸ್‌ ನಿಲ್ಲುವಲ್ಲಿಯೇ ತೆಗ್ಗು ಮಾಡಿದ್ದು, ಸುತ್ತಲಿನ ನೀರು ಅಲ್ಲಿಗೆ ಹರಿದು ಬರುವಂತೆ ಮಾಡಲಾಗಿದೆ. ಇದರಿಂದ ಮಳೆ ಬಂದಾಗ ನಿಲ್ದಾಣ ನೀರಿನ ಹೊಂಡದಂತಾಗುತ್ತದೆ.

ನೀರು ನಿಂತು, ನಿಂತು ಡಾಂಬರ್ ಎಲ್ಲ ಕಿತ್ತು ಹೋಗಿದೆ. ಇದರಿಂದಾಗಿ ನಿಲ್ದಾಣ ಕೆಸರುಮಯವಾಗುತ್ತಿತ್ತು. ನೀರು ನಿಲ್ಲುವುದನ್ನು ತಪ್ಪಿಸಲು ಅಧಿಕಾರಿಗಳು ಅಲ್ಲಿ ಬೇರೆ ಕಿತ್ತು ಹಾಕಿದ್ದ ಡಾಂಬರ್‌ ರಸ್ತೆಯ ತುಂಡುಗಳನ್ನು ತಂದು ಇಲ್ಲಿ ಹಾಕಿದ್ದಾರೆ.

ಡಾಂಬರ್‌ ಹಾಕಿರುವುದರಿಂದ ಅಲ್ಲಲ್ಲಿ ಏರು–ಪೇರಾಗಿದೆ. ಅದರಲ್ಲಿನ ಕಂಕರ್‌ಗಳು ನಿಲ್ದಾಣದ ತುಂಬೆಲ್ಲ ಹರಡಿಕೊಂಡಿವೆ. ಬಿಸಿಲು ಬೀಳುತ್ತಿರುವುದರಿಂದ ಬಸ್‌ ಬಂದಾಗ, ಹೋಗುವಾಗ ನಿಲ್ದಾಣವೆಲ್ಲ ದೂಳುಮಯವಾಗುತ್ತಿದೆ. ಅಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು, ನಿಲ್ಲಲೂ ಕಷ್ಟಪಡುವಂತಹ ಸ್ಥಿತಿ ಎದುರಾಗಿದೆ.

ಬಸ್ ನಿಲ್ದಾಣದ ಡಾಂಬರ್ ಕಿತ್ತು ಹಲವು ವರ್ಷಗಳೇ ಆಗಿವೆ. ಆಗಾಗ ಸಣ್ಣ ಪ್ರಮಾಣದಲ್ಲಿ ದುರಸ್ತಿ ಮಾಡುತ್ತಾರೆ. ಮತ್ತೇ ಕಿತ್ತು ಹಾಳಾಗುತ್ತದೆ. ಡಾಂಬರ್ ಬದಲಾಗಿ ಕಾಂಕ್ರೀಟ್‌ ಮಾಡಿದರೆ, ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎನ್ನುತ್ತಾರೆ ಪ್ರಯಾಣಿಕ
ದೊಡ್ಡನಗೌಡ ಪಾಟೀಲ.

ಹತ್ತಲು, ಇಳಿಯಲು ಸಂಕಷ್ಟ ದೂಳಿನಿಂದಾಗಿ ಕುಳಿತುಕೊಳ್ಳುವುದೂ ಕಷ್ಟ ಮಳೆ ಬಂದರೆ ಕೆಸರುಮಯ

ಡಾಂಬರೀಕರಣ ಮಾಡಲು ಕೆಎಸ್‌ಆರ್‌ಟಿಸಿಯಿಂದ ₹1.2 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು
ಅನಜಪ್ಪ ಲಮಾಣಿ ಸಹಾಯಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.