ADVERTISEMENT

ಬಾಗಲಕೋಟೆ: ಶಾಲಾ ಮಕ್ಕಳ ಆಧಾರ ನೋಂದಣಿಗೆ ಅಭಿಯಾನ

ಆಧಾರ ಮೇಲ್ವಿಚಾರಣಾ ಸಮಿತಿ ಸಭೆ-ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 3:06 IST
Last Updated 12 ಆಗಸ್ಟ್ 2025, 3:06 IST
ಬಾಗಲಕೋಟೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಧಾರ ಮೇಲ್ವಿಚಾರಣಾ ಸಮಿತಿ ಸಭೆ ಜರುಗಿತು
ಬಾಗಲಕೋಟೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಧಾರ ಮೇಲ್ವಿಚಾರಣಾ ಸಮಿತಿ ಸಭೆ ಜರುಗಿತು   

ಬಾಗಲಕೋಟೆ: ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿರುವ ಮಕ್ಕಳ ಆಧಾರ್‌  ನೋಂದಣಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಆಧಾರ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗು ಆಧಾರ್‌ ಕಾರ್ಡ ಹೊಂದುವುದು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ರೂಟ್ ಮ್ಯಾಪ್ ಹಾಕಿಕೊಳ್ಳಬೇಕೆಂದು ಸೂಚನೆ ನೀಡಿದರು.

ADVERTISEMENT

ಹೊಸದಾಗಿ ಆಧಾರ್‌ ನೋಂದಣಿ, ಲಿಂಗ, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆಗಳ ಸರಿಪಡಿಸುವಿಕೆ, ನವೀಕರಣಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆದುಕೊಳ್ಳತಕ್ಕದ್ದು. ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಪಡೆದಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

5ರಿಂದ 7ವರ್ಷ ಹಾಗೂ 15 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಒಂದು ಬಾರಿಗೆ ಉಚಿತ ನವೀಕರಣಕ್ಕೆ ಅವಕಾಶವಿದೆ. ಇಲ್ಲದಿದ್ದಲ್ಲಿ ₹100 ನೀಡಬೇಕಾಗುತ್ತದೆ. ಬಯೋಮೆಟ್ರಿಕ್ ನವೀಕರಣ ಸಮಯದಲ್ಲಿ ಮಾಡಿದರೆ ಉಚಿತವಾಗಿದ್ದು, ಪ್ರತ್ಯೇಕವಾಗಿ ₹50 ಶುಲ್ಕವಿರುತ್ತದೆ ಎಂದರು.

ಮೈಆಧಾರ್‌ ಪೋರ್ಟಲ್‌ನಲ್ಲಿ ಮುಂದಿನ ವರ್ಷ ಜೂನ್ 14 ರವರೆಗೆ ಉಚಿತವಾಗಿದೆ. ಆಧಾರ್‌ ಕೇಂದ್ರದಲ್ಲಿ ಮಾತ್ರ ₹50 ಶುಲ್ಕ ಪಾವತಿಸಿ ನವೀಕರಣ ಮಾಡಿಕೊಳ್ಳಬಹುದಾಗಿದೆ. ನಕಲಿ ಆಧಾರ್‌ ಕಾರ್ಡ್‌ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಮಾಹಿತಿ ನೀಡಬೇಕೆಂದು ಅವರು ಸೂಚಿಸಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಆಧಾರ್‌ ನವೀಕರಣದ ಬಗ್ಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೋಸ್ಟರ್, ಕರಪತ್ರ ಹಂಚುವ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಆಧಾರ್‌ ನವೀಕರಣಕ್ಕೆ ಜನ ಮುಂದಾಗುತ್ತಾರೆ ಎಂದು ತಿಳಿಸಿದರು.

ಯುಐಡಿಎಐನ ಸಹಾಯಕ ವ್ಯವಸ್ಥಾಪಕ ಡೆವಿಡ್ ಮಾತನಾಡಿ, ಜಿಲ್ಲೆಯಲ್ಲಿ 144 ಆಧಾರ್‌ ನೋಂದಣಿ ಕೇಂದ್ರಗಳಿದ್ದು, 24,08,331 ಆಧಾರ್‌ ಕಾರ್ಡ ಜನರೇಟ್ ಮಾಡಲಾಗಿದೆ. ಇದರಲ್ಲಿ 0ದಿಂದ 5 ವರ್ಷದ 85,393 ಮಕ್ಕಳು, 5ರಿಂದ 18 ವರ್ಷದೊಳಗಿನ 6,90,755 ಹಾಗೂ 18 ವರ್ಷ ಮೇಲ್ಪಟ್ಟವರು 16,32,183 ಜನರೇಟ್‌ ಆಗಿವೆ. 22,89,517 ಆಧಾರ್‌ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗಿದೆ. 1,18,814 ಮೊಬೈಲ್ ಲಿಂಕ್‌ಗೆ ಬಾಕಿ ಉಳಿದಿವೆ. ಜಿಲ್ಲೆಯ 3,76,642 ವಿದ್ಯಾಥಿಗಳ ಪೈಕಿ 3,09,134 ವಿದ್ಯಾರ್ಥಿಗಳ ಆಧಾರ್‌ ಕಾರ್ಡ್‌ ಪರಿಶೀಲನೆಗೆ ಕಳುಹಿಸಿದ್ದು, ಆ ಪೈಕಿ 2,35,990 ಆಧಾರ್‌ ಕಾರ್ಡ್‌  ಪೂರ್ಣಗೊಂಡಿವೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಶಾಲಾ ಶಿಕ್ಷಣ ಇಲಾಖೆಯ ಉಪ ಸಮನ್ವಯಾಧಿಕಾರಿ ಸಿ.ಆರ್.ಓಣಿ, ಅಂಚೆ ಕಚೇರಿಯ ಅಧೀಕ್ಷಕ ಹಸಬಿ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ ಹೂಗಾರ, ಜಿಲ್ಲಾ ಆಧಾರ ಸಮಾಲೋಚಕ ಸಿದ್ದಪ್ಪ  ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.