ADVERTISEMENT

ವಿಜ್ಞಾನ ಕೇಂದ್ರಕ್ಕೆ ಶ್ರೀಘ್ರ ನಕ್ಷತ್ರ ಲೋಕ

ವಿಜ್ಞಾನದ ಅರಿವು ಮೂಡಿಸುವ ಉದ್ದೇಶದ ಉಪ‍ಪ್ರಾದೇಶಿಕ ವಿಜ್ಞಾನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 15 ಮೇ 2019, 14:54 IST
Last Updated 15 ಮೇ 2019, 14:54 IST
ಬಾಗಲಕೋಟೆ ಸಮೀಪದ ತೋಟಗಾರಿಕೆ ವಿಶ್ವ ವಿದ್ಯಾಲಯಕ್ಕೆ ಮಂಗಳವಾರ ವಿಜ್ಞಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಬಾಗಲಕೋಟೆ ಸಮೀಪದ ತೋಟಗಾರಿಕೆ ವಿಶ್ವ ವಿದ್ಯಾಲಯಕ್ಕೆ ಮಂಗಳವಾರ ವಿಜ್ಞಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಬಾಗಲಕೋಟೆ: ‘ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಶೀಘ್ರವೇ ಅತ್ಯಾಧುನಿಕ ನಕ್ಷತ್ರ ಲೋಕ ಹಾಗೂ ಇತರೆ ಒಳಾಂಗಣ ವಿಜ್ಞಾನ ಉಪಕರಣಗಳನ್ನು ತರಿಸಲಾಗುತ್ತದೆ’ ಎಂದು ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ.ಎಂ.ಇಂದಿರೇಶ ತಿಳಿಸಿದರು.

ಇಲ್ಲಿನ ತೋಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿಜ್ಞಾನ ಕೇಂದ್ರದ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿ, ‘ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ, ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ’ ಎಂದರು.

‘ಈಗಾಗಲೇ ₹ 90 ಲಕ್ಷ ವೆಚ್ಚದಲ್ಲಿ ಆಧುನಿಕ ನಕ್ಷತ್ರ ಲೋಕ ಹಾಗೂ ಇತರೆ ವಿಜ್ಞಾನ ವಸ್ತುಗಳನ್ನು ಖರೀದಿಸಲು ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯಿಂದ ಅನುಮತಿ ದೊರೆತಿದೆ’ ಎಂದರು.

ADVERTISEMENT

ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಅಶೋಕ ಆಲೂರ ಮಾತನಾಡಿ, ‘ಈಗಾಗಲೇ ₹ 4 ಕೋಟಿ ವೆಚ್ಚದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವಿಜ್ಞಾನ ಕೇಂದ್ರದ ಸುತ್ತಲೂ ಉತ್ತಮ ಉದ್ಯಾನ ನಿರ್ಮಾಣಕ್ಕೆ₹ 25 ಲಕ್ಷ ಹಾಗೂ ಪ್ರಸಕ್ತ ಸಾಲಿನ ವಿವಿಧ ಕಾರ್ಯಕ್ರಮಗಳಿಗೆ, ಸಿಬ್ಬಂದಿ ಖರ್ಚಿಗೆ₹ 30 ಲಕ್ಷ ವ್ಯಯಿಸಲಾಗುತ್ತದೆ’ ಎಂದರು.

‘ಕಟ್ಟಡದಲ್ಲಿ ವಿವಿಧ ಗ್ಯಾಲರಿಗಳನ್ನು ಪ್ರದರ್ಶನ ಮಳಿಗೆ, ವಿವಿಧ ವಿಷಯಗಳ ಪ್ರಾತ್ಯಕ್ಷಿಕೆಗಳನ್ನು ನಿರ್ಮಿಸಲಾಗಿದೆ. ಭಾರತೀಯ ವಿಜ್ಞಾನಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು, ಜೀವ ವೈವಿಧ್ಯ, ಪರಿಸರ, ಆಹಾರ, ವಿಜ್ಞಾನ ದಿನ, ಮಹಿಳಾ ದಿನ, ಜಲದಿನಗಳನ್ನು ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗುವುದು’ ಎಂದರು.

ಬಿವಿವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎನ್.ಹೆರಕಲ್, ಸಲಹಾ ಸಮಿತಿ ಸದಸ್ಯ ಪ್ರೊ. ಸಿ.ಜಿ.ಹವಾಲ್ದಾರ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.