ಬಾಗಲಕೋಟೆ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಪ್ರತಿ ವರ್ಷ ನೀಡುವ ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ದೆಹಲಿಯ ರೈತ ಹೋರಾಟಗಾರರಿಗೆ ಅರ್ಪಿಸಲಾಗಿದೆ ಎಂದು ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಮೊತ್ತ ₹ 1 ಲಕ್ಷ ನಗದು, ಪುರಸ್ಕಾರ ಹಾಗೂ ತಾಮ್ರ ಪತ್ರ ಒಳಗೊಂಡಿದೆ. ಪ್ರತಿ ವರ್ಷ ಸಂಕ್ರಾಂತಿ ದಿನ ಪ್ರಶಸ್ತಿ ವಿತರಣೆ ನಡೆಯುತ್ತಿತ್ತು. ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ಕಾರಣ ಪ್ರಶಸ್ತಿ ವಿತರಣೆ ಸಮಾರಂಭ ಮುಂದೂಡಲಾಗಿದೆ. ದೆಹಲಿಯಲ್ಲಿ ರೈತರ ಹೋರಾಟ ಮುಗಿದ ಮೇಲೆ ಅದರ ನಾಯಕರನ್ನು ಶ್ರೀ ಪೀಠಕ್ಕೆ ಕರೆದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿಗೆ ಈ ಮೊದಲು ಜಲತಜ್ಞ ರಾಜೇಂದ್ರ ಸಿಂಗ್, ಗಾಂಧಿವಾದಿ ಅಣ್ಣಾ ಹಜಾರೆ, ಪರಿಸರವಾದಿ ಮೇಧಾ ಪಾಟ್ಕರ್, ಡಾ.ಬಾಬಾ ಅಢಾವೆ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಡಾ.ಎಂ.ಎಸ್.ಸ್ವಾಮಿನಾಥನ್, ತೆಲಂಗಾಣದ ಮಿಷನ್ ಭಗೀರಥ ಕುಡಿಯುವ ನೀರಿನ ರುವಾರಿ ಪ್ರಕಾಶರಾವ್ ವೀರಮಲ್ಲ ಭಾಜನರಾಗಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.