
ಪಟ್ಟದಕಲ್ಲು (ಬಾದಾಮಿ): ವಿಶ್ವ ಪರಂಪರೆಯ ತಾಣ ಚಾಲುಕ್ಯರ ಶಿಲ್ಪಕಲೆಯ ತೊಟ್ಟಿಲಾದ ಪಟ್ಟದಕಲ್ಲಿನ ಸ್ಮಾರಕಗಳಲ್ಲಿ ಶಾಲಾ ಕಾಲೇಜುಗಳ ಮಕ್ಕಳ ಕಲರವದೊಂದಿಗೆ ಪ್ರವಾಸಿಗರ ದಂಡು ಆಗಮಿಸಿತ್ತು.
ಚಾಲುಕ್ಯರ ಐತಿಹಾಸಿಕ ಪರಂಪರೆಯ ಸ್ಮಾರಕಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರಗಳಾದ ಬನಶಂಕರಿ, ಶಿವಯೋಗಮಂದಿರಕ್ಕೆ ಭಾನುವಾರ ಸಾಗರೋಪಾದಿಯಂತೆ ಪ್ರವಾಸಿಗರು ಭೇಟಿ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ ಮಕ್ಕಳು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಪಟ್ಟದಕಲ್ಲಿನ ಸ್ಮಾರಕಗಳ ಫೋಟೊಗಳನ್ನು ಸೆಲ್ಫಿ ಪಡೆಯುತ್ತಿದ್ದರು.
ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳಲ್ಲಿ ಶಾಲಾ ಕಾಲೇಜಿನ ಮಕ್ಕಳು ಆಗಮಿಸಿದ್ದರು. ಕುಟುಂಬ ಸಮೇತರಾಗಿ ಮತ್ತು ಸ್ನೇಹಿತರೊಂದಿಗೆ ಕಾರಿನಲ್ಲಿ ಆಗಮಿಸಿದ್ದರು. ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲ ಎಂದು ಚಾಲಕರು ಹೇಳಿದರು.
‘ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಸ್ಮಾರಕಗಳನ್ನು ನೋಡಿದೆ. ಚಾಲುಕ್ಯರ ಶಿಲ್ಪಿಗಳು ತುಂಬಾ ಅದ್ಭುತವಾಗಿ ಕಲ್ಲಿನಲ್ಲಿ ಪಾರಂಪಾರಿಕ ಮೂರ್ತಿಶಿಲ್ಪಗಳನ್ನು ಕೆತ್ತಿದ್ದಾರೆ. ಪ್ರವಾಸೋದ್ಯಮ ಬೆಳೆಯಲು ಪ್ರವಾಸಿಗರಿಗೆ ಮೂಲ ಸೌಲಭ್ಯವನ್ನು ಕಲ್ಪಿಸಬೇಕಿದೆ ’ ಎಂದು ಮಹಾರಾಷ್ಟ್ರದ ಪುಣೆ ಪ್ರವಾಸಿ ಶ್ರೀಕಾಂತ ಪ್ರತಿಕ್ರಿಯಿಸಿದರು.
ಶನಿವಾರ (ಡಿ.27) ಒಂದೇ ದಿನ ಬಾದಾಮಿ ಸ್ಮಾರಕಗಳ ವೀಕ್ಷಣೆಯಿಂದ ಪ್ರವಾಸಿಗರಿಂದ ₹1.55 ಲಕ್ಷ, ಪಟ್ಟದಕಲ್ಲಿನಲ್ಲಿ ₹ 2.10 ಲಕ್ಷ ಆದಾಯ ಬಂದಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ತಿಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.