
ಪಟ್ಟದಕಲ್ಲು (ಬಾದಾಮಿ) : ‘ ಚಾಲುಕ್ಯರು ಇನ್ನೂರ ಐವತ್ತು ವರ್ಷಗಳ ಕಾಲ ಆಳ್ವಿಕೆಯಿಂದ ವೈಭವದ ಸಾಮ್ರಾಜ್ಯವನ್ನು ಕಟ್ಟಿದರು. ಚಾಲುಕ್ಯರು ನಿರ್ಮಿಸಿದ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡಬೇಕು. ವಿದ್ಯಾರ್ಥಿಗಳು ಚಾಲುಕ್ಯರ ಇತಿಹಾಸ ಪರಂಪರೆಯ ಅಧ್ಯಯನ ಮಾಡಬೇಕು ’ ಎಂದು ನಿವೃತ್ತ ಪ್ರಾಚಾರ್ಯ ರವೀಂದ್ರ ಮೂಲಿಮನಿ ಹೇಳಿದರು.
ವಿಶ್ವ ಪರಂಪರೆ ತಾಣವಾದ ಪಟ್ಟದಕಲ್ಲಿನ ಸ್ಮಾರಕಗಳ ಎದುರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಧಾರವಾಡ ವಲಯದಿಂದ ಬುಧವಾರ ಹಮ್ಮಿಕೊಂಡ ವಿಶ್ವ ಪರಂಪರಾ ಸಪ್ತಾಹ ಸಮಾರಂಭಕ್ಕೆ ಅವರು ಚಾಲನೆ ನೀಡಿದರು.
‘ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ನಾಗನಾಥಕೊಳ್ಳ, ಹುಲಿಗೆಮ್ಮನಕೊಳ್ಳದಲ್ಲಿ ಚಾಲುಕ್ಯರ ಶಿಲ್ಪ ಕಲಾವಿದರು ವೈವಿಧ್ಯಮಯ ಸ್ಮಾರಕಗಳನ್ನು ನಿರ್ಮಿಸಿ ವಿಶ್ವಕ್ಕೆ ಶಿಲ್ಪಕಲೆಯ ಶ್ರೀಮಂತಿಕೆಯನ್ನು ಕೊಟ್ಟಿದ್ದಾರೆ. ಸ್ಮಾರಕಗಳನ್ನು ವೀಕ್ಷಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉಪ ಅಧೀಕ್ಷಕ ಶ್ರೀಗುರು ಬಾಗಿ, ಸಹಾಯಕ ಅಧೀಕ್ಷಕ ಪ್ರಸನ್ನ, ಸಹಾಯಕ ಸಂರಕ್ಷಣಾ ಅಧಿಕಾರಿಗಳಾದ ಪ್ರಶಾಂತ ಕುಲಕರ್ಣಿ, ರಾಜಾರಾಮನ್ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಶೈಲ ತೋಟಗೇರ ಇದ್ದರು.
ಸಪ್ತಾಹದ ಅಂಗವಾಗಿ ವಿದ್ಯಾರ್ಥಿನಿಯರಿಗೆ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.